ಹಿಂದು ನಾಯಕರನ್ನು ಬಂಧಿಸಿದ್ರೆ ಸುಮ್ಮನಿರಲ್ಲ : ವಿಎಚ್‌ಪಿ ವಾರ್ನಿಂಗ್

ಮಂಗಳವಾರ, 11 ಜುಲೈ 2017 (16:21 IST)
ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅಂತ್ಯಸಂಸ್ಕಾರ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆಗೆ ಸಂಬಂಧಿಸಿದಂತೆ ಅನಾವಶ್ಯಕವಾಗಿ ಕೇಸ್ ದಾಖಲಿಸಿ ಹಿಂದು ನಾಯಕರನ್ನು ಬಂಧಿಸಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಿಶ್ವಹಿಂದು ಪರಿಷತ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
 
ಒಂದು ವೇಳೆ ಪೊಲೀಸರು ಹಿಂದು ನಾಯಕರನ್ನು ಬಂಧಿಸಲು ತೆರಳಿದಲ್ಲಿ ಮುಂದಾಗುವ ಅನಾಹುತಕ್ಕೆ ಸರಕಾರವೇ ನೇರ ಹೊಣೆಯಾಗುತ್ತದೆ ಎಂದು ವಿಎಚ್‌ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೆನವಾ ಗುಡುಗಿದ್ದಾರೆ.
 
ಬಂಟ್ವಾಳದಲ್ಲಿ ಅತಿ ಸೂಕ್ಷ್ಮಪ್ರದೇಶವಾಗಿರುವ ಕೈಕಂಬದ ಬಳಿ ಶಾಂತಿಯುತವಾಗಿ ಮೆರವಣಿಗೆ ಬಂದಾಗ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಲ್ಲಿ ಯಾವುದೇ ಹಿಂದುಗಳ ಕೈವಾಡವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 
ಘಟನೆಗೆ ಸಂಬಂಧಿಸಿದಂತೆ ಸರಕಾರ ಹಿಂದು ಸಂಘಟನೆಗಳ ನಾಯಕರನ್ನು ಬಂಧಿಸಲು ಚಿಂತನೆ ನಡೆಸಿದೆ. ಇದರಲ್ಲಿ ಸ್ಥಳೀಯ ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.
 
ಬಂಟ್ವಾಳದ ಬಿ.ಸಿ.ರೋಡ್‌ನಲ್ಲಿ ಜುಲೈ 4 ರಂದು ದುಷ್ಕರ್ಮಿಗಳು ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಮೇಲೆ ಹಲ್ಲೆ ನಡೆಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶರತ್ ಜುಲೈ 8 ರಂದು ಸಾವನ್ನಪ್ಪಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ