ವಿಜಯ್ ಸೂರ್ಯ ಕಮ್ ಬ್ಯಾಕ್: ಬೇರೆಯವರೆಲ್ಲಾ ಇನ್ನು ಮುಂದೆ ಫ್ಲಾಪ್ ಎಂದ ಫ್ಯಾನ್ಸ್

Krishnaveni K

ಗುರುವಾರ, 15 ಆಗಸ್ಟ್ 2024 (13:38 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸಿದ್ಧಾರ್ಥ್ ಆಗಿ ಹುಡುಗಿಯರ ಮನಕ್ಕೆ ಲಗ್ಗೆಯಿಟ್ಟಿದ್ದ ಗುಳಿ ಕೆನ್ನೆ ಹೀರೋ ವಿಜಯ್ ಸೂರ್ಯ ಈಗ ಮತ್ತೆ ಅದೇ ವಾಹಿನಿಗೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

ವಿಜಯ್ ಸೂರ್ಯ ಎನ್ನುವುದಕ್ಕಿಂತ ಸಿದ್ಧಾರ್ಥ್ ಎಂದೇ ಪ್ರೇಕ್ಷಕರಿಗೆ ಪರಿಚಿತರಾಗಿದ್ದ ಅವರು ಈಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ದೃಷ್ಟಿ ಬೊಟ್ಟು ಧಾರವಾಹಿಗೆ ವಿಜಯ್ ಸೂರ್ಯ ನಾಯಕರಾಗುತ್ತಿದ್ದಾರೆ. ಅಗ್ನಿಸಾಕ್ಷಿ ಬಳಿಕ ವಿಜಯ್ ಕಲರ್ಸ್ ಕನ್ನಡದಲ್ಲಿ ಮಾಡುತ್ತಿರುವ ಮೊದಲ ಸೀರಿಯಲ್ ಇದಾಗಿದೆ.

ಅಗ್ನಿಸಾಕ್ಷಿ ಬಳಿಕ ವಿಜಯ್ ಕೆಲವು ಧಾರವಾಹಿ, ಸಿನಿಮಾ ಎಂದು ಹಲವು ಪ್ರಯೋಗ ನಡೆಸಿದ್ದಾರೆ. ಆದರೆ ಅವರಿಗೆ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸಿಕ್ಕ ಯಶಸ್ಸು ಸಿಗಲಿಲ್ಲ. ಈಗ ಮತ್ತೆ ಕಲರ್ಸ್ ಗೆ ವಾಪಸ್ ಆಗ್ತಿದ್ದಾರೆ. ವಿಶೇಷವೆಂದರೆ ಈ ಧಾರವಾಹಿಯನ್ನು ನಿರ್ಮಿಸುತ್ತಿರುವುದು ಗಟ್ಟಿಮೇಳ ಧಾರವಾಹಿ ಖ್ಯಾತಿಯ ವೇದಾಂತ್ ಅಲಿಯಾಸ್ ರಕ್ಷ್ ಅವರು. ಈ ಮೊದಲು ಪುಟ್ಟಗೌರಿ ಮದುವೆ ಮೂಲಕ ಕಲರ್ಸ್ ವಾಹಿನಿ ಜೊತೆಗೆ ಅವರಿಗೆ ಹಳೆಯ ನಂಟಿದೆ.

ಅದರಲ್ಲೂ ವಿಜಯ್ ಮತ್ತು ರಕ್ಷ್ ಉತ್ತಮ ಗೆಳೆಯರು. ವಿಶೇಷವೆಂದರೆ ಇಷ್ಟು ದಿನ ಲವರ್ ಬಾಯ್ ಇಮೇಜ್ ಹೊಂದಿದ್ದ ವಿಜಯ್ ಸೂರ್ಯ ಇದೇ ಮೊದಲ ಬಾರಿಗೆ ಡಾನ್ ರೀತಿಯ ಖಡಕ್ ಪಾತ್ರ ಮಾಡುತ್ತಿದ್ದಾರೆ. ಅವರ ಪ್ರೋಮೋ ಈಗಾಗಲೇ ಹೊರಬಂದಿದ್ದು, ಪ್ರೋಮೋ ನೋಡಿದ ಫ್ಯಾನ್ಸ್ ಕಲರ್ಸ್ ಗೆ ವಿಜಯ್ ಸೂರ್ಯ ವಾಪಸ್ ಬಂದಿದ್ದಾರೆ ಎಂದರೆ ಇನ್ನುಳಿದ ಹೀರೋಗಳ ಆಟವೆಲ್ಲಾ ಇನ್ಮುಂದೆ ಬಂದ್ ಆಗಲಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ