ಅನುಪಮಾ ಶೆಣೈ ದೂರು ಹಿನ್ನೆಲೆ: ಮಹಿಳಾ ಆಯೋಗದಿಂದ ಎಸ್‌ಪಿ ಚೇತನ್‌ಗೆ ನೋಟಿಸ್

ಶುಕ್ರವಾರ, 24 ಜೂನ್ 2016 (08:39 IST)
ಕೂಡ್ಲಗಿಯ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ನೀಡಿರುವ ದೂರನ್ನು ಸ್ವೀಕರಿಸಿರುವ ರಾಜ್ಯ ಮಹಿಳಾ ಆಯೋಗ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಆರ್. ಚೇತನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
 
ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿರುವ ಎಸ್‌ಪಿ ಚೇತನ್ ಈ ತಿಂಗಳ 30ರಂದು ಮಹಿಳಾ ಆಯೋಗದೆದುರು ಹೇಳಿಕೆ ನೀಡುವುದಾಗಿ ತಿಳಿಸಿದ್ದಾರೆ.
 
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ನನಗೆ ಕಿರುಕುಳ ನೀಡುತ್ತಿದ್ದರು. ನನ್ನ ಅಧೀನ ಅಧಿಕಾರಿಗಳು ಕೆಲಸದಲ್ಲಿ ಸಹಕಾರ ನೀಡುತ್ತಿರಲಿಲ್ಲ. ನಾನು ರಾಜೀನಾಮೆ ನೀಡಲು ಚೇತನ್‌ ಅವರೇ ಕಾರಣರಾಗಿರುತ್ತಾರೆ’  ಎಂದು ತಮ್ಮ ಆಪ್ತರೊಬ್ಬರ ಮೂಲಕ ರಾಜ್ಯ ಮಹಿಳಾ ಆಯೋಗಕ್ಕೆ ಅನುಪಮಾ ಮಂಗಳವಾರ ದೂರು ಸಲ್ಲಿಸಿದ್ದರು. ದೂರು ಅರ್ಜಿ ವಿಚಾರಣೆಯನ್ನು ಪೊಲೀಸರಿಗೆ ನೀಡಬಾರದು. ಆಯೋಗವೇ ತನಿಖೆ ನಡೆಸಬೇಕು’ ಎಂದು  ಅವರು ಮನವಿ ಮಾಡಿಕೊಂಡಿದ್ದರು.
 
ತಾವು ರಾಜೀನಾಮೆ ನೀಡಿದ ದಿನ ಅಂದರೆ ಜೂನ್‌ 4ರಂದು ಕೂಡ್ಲಿಗಿ ಡಿವೈಎಸ್ಪಿ ಕಚೇರಿ ಮುಂದೆ ತಮ್ಮ ವಿರುದ್ಧ ನಡೆದ ಪ್ರತಿಭಟನೆಗೂ ಚೇತನ್ ಅವರೇ ಕುಮ್ಮಕ್ಕು ನೀಡಿದ್ದರು ಎಂದು ಅನುಪಮಾ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ