ನನಗೂ ಐಶ್ವರ್ಯಾ ಗೌಡಗೂ ಯಾವುದೇ ಸಂಬಂಧವಿಲ್ಲ: ಇಡಿ ಮುಂದೆ ಹಾಜರಾದ ಡಿಕೆ ಸುರೇಶ್‌

Sampriya

ಮಂಗಳವಾರ, 8 ಜುಲೈ 2025 (16:07 IST)
ಬೆಂಗಳೂರು: ಐಶ್ವರ್ಯಾ ಗೌಡ ಚಿನ್ನಾಭರಣ ವಂಚನೆ ಪ್ರಕರಣ ಸಂಬಂಧ ಕಾಂಗ್ರೆಸ್‌ನ ಮಾಜಿ ಸಂಸದ ಡಿಕೆ ಶಿವಕುಮಾರ್ ಅವರು ಇಂದು ಇಡಿ ಅಧಿಕಾರಿಗಳ ಮುಂದೆ ಹಾಜರಾದರು. 

ಜೂನ್‌ 17ರಂದು ಡಿ.ಕೆ.ಸುರೇಶ್ ಅವರ ಮನೆಗೆ ತೆರಳಿದ್ದ ಇ.ಡಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ನಗರದ ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಮಂಗಳವಾರ ತೆರಳಿದ್ದ ಸುರೇಶ್‌ ಅವರು ವಿಚಾರಣೆಗೆ ಹಾಜರಾಗಿದ್ದರು.

ವಿಚಾರಣೆ ಬಳಿಕ ಮಾತನಾಡಿದ ಅವರು, ‘ಆಸ್ತಿಗೆ ಸಂಬಂಧಿಸಿದ ಮಾಹಿತಿ ಮತ್ತು ದಾಖಲೆಗಳನ್ನು ಅಧಿಕಾರಿಗಳು ಕೇಳಿದ್ದರು, ನೀಡಿದ್ದೇನೆ. ಅವರ ವಿಚಾರಣೆಗೆ ಸಹಕರಿಸಿದ್ದೇನೆ’ ಎಂದರು.

‘ನನಗೂ ಐಶ್ವರ್ಯಾ ಗೌಡಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಹೀಗಿದ್ದೂ ಅವರ ವಂಚನೆ ಪ್ರಕರಣಕ್ಕೆ ನನ್ನನ್ನು ಹೇಗೆ ತಳಕು ಹಾಕುತ್ತಿದ್ದಾರೆ ಎಂಬುದು ಗೊತ್ತಾಗಿಲ್ಲ. ಅವರು ತನಿಖೆ ನಡೆಸುತ್ತಿದ್ದಾರೆ, ನಡೆಸಲಿ. ನಾನು ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದರು.

ಏನಿದು ಪ್ರಕರಣ: ಚಿನ್ನ ಮತ್ತು ಹಣ ಹೂಡಿಕೆಗೆ ದುಪ್ಪಟ್ಟು ಲಾಭ ಕೊಡಿಸುತ್ತೇನೆ ಎಂದು ಹೇಳಿ ಐಶ್ವರ್ಯಾ ಗೌಡ ಹೇಳಿ ಹಲವು ಚಿನ್ನಾಭರಣ ವ್ಯಾಪಾರಿಗಳಿಂದ ಚಿನ್ನ ಪಡೆದುಕೊಂಡಿದ್ದರು. ಆದರೆ ಹಣವನ್ನೂ ನೀಡಿಲ್ಲ, ಚಿನ್ನವನ್ನೂ ವಾಪಸ್‌ ಮಾಡಿಲ್ಲ ಎಂದು ಕೆಲ ಚಿನ್ನಾಭರಣ ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿದ್ದರು. 

ಹಣ ವಾಪಸ್‌ ಕೇಳಿದಾಗ, ತಾನು ಡಿ.ಕೆ.ಸುರೇಶ್ ಅವರ ಸೋದರಿ ಎಂದು ಹೇಳಿ ಬೆದರಿಕೆ ಹಾಕಿದ್ದರು ಎಂದೂ ದೂರಿನಲ್ಲಿ ವಿವರಿಸಿದ್ದರು.

‘ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ’ ಎಂದು ಡಿ.ಕೆ.ಸುರೇಶ್‌ ಅವರು ಸಹ ಪೊಲೀಸರಿಗೆ ದೂರು ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ