ಪ್ರಯಾಗರಾಜ್: ಇಲ್ಲಿ ಒಂದೂವರೆ ತಿಂಗಳ ಕಾಲ ನಡೆದ ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವಕ್ಕೆ ಮಹಾಶಿವರಾತ್ರಿಯ ದಿನವಾದ ಬುಧವಾರ ತೆರೆಬಿದಿದ್ದೆ. ಈಗ ಸ್ವಚ್ಚತಾ ಮೇಳದ ಸರದಿ. ಭಕ್ತರು ಮಿಂದೆದ್ದ ತ್ರಿವೇಣಿ ಸಂಗಮದಲ್ಲಿ ನೈಮರ್ಲ್ಯ ಕಾರ್ಯ ಭರದಿಂದ ಸಾಗಿದೆ.
144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳವು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ 45 ದಿನಗಳ ಕಾಲ ನಡೆದಿದೆ. ಈ ಅವಧಿಯಲ್ಲಿ ಒಟ್ಟು 66 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಮಿಂದಿದ್ದು ಪುನೀತರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಪುಣ್ಯಸ್ನಾನ ಮಾಡಿದ್ದಾರೆ.
ಜನವರಿ 13ರಿಂದ ಆರಂಭಗೊಂಡು ಬುಧವಾರದ ತನಕ ನಡೆದ ಕುಂಭಮೇಳವು ಸಣ್ಣ ಪುಟ್ಟ ಅಡಚಣೆ ಮಧ್ಯೆ ಯಶಸ್ವಿಯಾಗಿದೆ. ಕಾರ್ಯಕ್ರಮದ ಅಚ್ಚುಕಟ್ಟುತನಕ್ಕೆ ವಿರೋಧ ಪಕ್ಷಗಳ ನಾಯಕರಿಂದಲೂ ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಮಹಾ ಕುಂಭಮೇಳಕ್ಕೆ ತೆರೆ ಬಿದ್ದ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಭಕ್ತರಿಗಾಗಿ ತಾತ್ಕಾಲಿವಾಗಿ ನಿರ್ಮಾಣ ಮಾಡಿದ್ದ ಟೆಂಟ್ ಸಿಟಿಯ ಸ್ವಚ್ಛತಾ ಕಾರ್ಯಕ್ಕೆ ಹಸಿರು ನಿಶಾನೆ ತೋರಿದರು.
ಇದೇ ವೇಳೆ ಮುಖ್ಯಮಂತ್ರಿ ಅವರು ಕುಂಭಮೇಳದಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು, ಉದ್ಯೋಗಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳನ್ನು ಸನ್ಮಾನಿಸಿದರು. ಇದೇ ವೇಳೆ ಮಹಾಕುಂಭ ಮೇಳದ ಸಮಯದಲ್ಲಿ ದಾಖಲಾದ ನಾಲ್ಕು ವಿಶ್ವ ದಾಖಲೆಗಳಿಗೆ ಪ್ರಮಾಣಪತ್ರಗಳನ್ನು ಆದಿತ್ಯನಾಥ್ ಸ್ವೀಕರಿಸಿದರು.