ಭೀಕರ ಅಪಘಾತಕ್ಕೆ 10 ಬಲಿ

ಮಂಗಳವಾರ, 28 ಫೆಬ್ರವರಿ 2017 (11:35 IST)
ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಉರುಳಿ 11 ಜನರು ದುರ್ಮರಣವನ್ನಪ್ಪಿದ ದಾರುಣ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮುಳಪ್ಪಾಡು ಬಳಿ ನಡೆದಿದೆ. ಈ ದುರ್ಘಟನೆಯಲ್ಲಿ 17 ಜನರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ವಿಜಯವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡವರಲ್ಲಿ ನಾಲ್ಕು ಜನರ ಪರಿಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. 
 
ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಮುಂಜಾನೆ 7.30ರಿಂದ 8ಗಂಟೆ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದು ಬಸ್ ಭುವನೇಶ್ವರದಿಂದ ಹೈದರಾಬಾದ್ ಕಡೆ ತೆರಳುತ್ತಿತ್ತು. ಮೃತರಲ್ಲಿ ಹೆಚ್ಚಿನವರು ಭುವನೇಶ್ವರದವರೆಂದು ತಿಳಿದು ಬಂದಿದೆ. 
 
ಬಸ್ ಚಾಲಕ ನಿದ್ರೆಯ ಮಂಪರಿನಲ್ಲಿದ್ದುದೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದ್ದು ಈ ಬಸ್ ಒಡೆತನ ಹೊಂದಿರುವ ದಿವಾಕರ್ ಟ್ರಾವೆಲ್ಸ್ ವಿರುದ್ಧ ಪ್ರಕರಣ ದಾಖಲಾಗಿದೆ.
 
ನಜ್ಜುಗುಜ್ಜಾಗಿರುವ ಬಸ್ ಘಟನೆಯ ಭೀಕರತೆಗೆ ಸಾಕ್ಷಿಯಾಗಿದ್ದು, ಮೃತರ ಶವಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಸ್ ಅವಶೇಷಗಳಡಿ ಸಿಲುಕಿದ್ದ ಒಂದು ಶವವನ್ನು ಕಟರ್ ಬಳಸಿ ತುಂಡು ಮಾಡಿ ತೆಗೆಯಲಾಯಿತು ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ. 
 
ಅಪಘಾತ ಸಂಭವಿಸಿದಾಗ ಬಸ್‌ನಲ್ಲಿ 60 ಪ್ರಯಾಣಿಕರಿದ್ದರು ಎನ್ನಲಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಪೊಲೀಸರು, ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪ್ರಯಾಣಿಕರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ