ಬಿಹಾರ್: ಪತ್ರಕರ್ತ ರಂಜನ್ ಹತ್ಯೆಗೈದ ಐವರು ಆರೋಪಿಗಳ ಬಂಧನ

ಬುಧವಾರ, 25 ಮೇ 2016 (14:56 IST)
ಖ್ಯಾತ ಪತ್ರಕರ್ತ ರಾಜದೇವ್ ರಂಜನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 
 
ಪತ್ರಕರ್ತ ರಾಜದೇವ್ ರಂಜನ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಐವರು ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ ದೇಶಿಯ ಪಿಸ್ತೂಲ್ ಮತ್ತು ಮೂರು ಮೋಟರ್ ಸೈಕಲ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡಿಐಜಿ ಸುನೀಲ್ ಕುಮಾರ್ ತಿಳಿಸಿದ್ದಾರೆ.  
 
ಆರೋಪಿಗಳನ್ನು ರೋಹಿತ್ ಕುಮಾರ್, ವಿಜಯ್ ಕುಮಾರ್ ಗುಪ್ತಾ, ರಾಜೇಶ್ ಕುಮಾರ್, ಇಶುಕುಮಾರ್ ಮತ್ತು ಸೋನುಕುಮಾರ್ ಗುಪ್ತಾ ಎಂದು ಗುರುತಿಸಲಾಗಿದೆ. ರಂಜನ್ ಹತ್ಯೆಯಲ್ಲಿ ತಮ್ಮ ಕೈವಾಡವಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಘಟನೆಯಲ್ಲಿ ಭಾಗಿಯಾಗಿರುವ ಇತರ ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಪತ್ರಿಕೆಯೊಂದರ ವಿಭಾಗದ ಮುಖ್ಯಸ್ಥರಾಗಿದ್ದ ರಂಜನ್ ಮೇ 13 ರಂದು ತಮ್ಮ ಮೋಟರ್‌ಸೈಕಲ್‌ನಲ್ಲಿ ಮಾರುಕಟ್ಟೆ ಬಳಿ ತೆರಳುತ್ತಿದ್ದಾಗ ಅವರನ್ನು ಆರೋಪಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. 
 
ರಂಜನ್ ಹತ್ಯೆ ರಾಜ್ಯ ರಾಜಕೀಯದಲ್ಲಿ ಕೋಲಾಹಲವೆಬ್ಬಿಸಿದ್ದು, ನಿತೀಶ್ ಕುಮಾರ್ ಸರಕಾರದ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು.

 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ