ಡಾ ಮನಮೋಹನ್ ಸಿಂಗ್ ಗೆ ಸ್ಮಾರಕದ ಕಾಂಗ್ರೆಸ್ ಬೇಡಿಕೆ ಒಪ್ಪಿದ ಕೇಂದ್ರ ಸರ್ಕಾರ
ಮೊನ್ನೆ ನಮ್ಮನ್ನಗಲಿದ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಗೆ ಅಟಲ್ ಬಿಹಾರಿ ವಾಜಪೇಯಿಯಂತೆ ಪ್ರತ್ಯೇಕ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಕಾಂಗ್ರೆಸ್ ಮೋದಿ ಸರ್ಕಾರಕ್ಕೆ ಬೇಡಿಕೆಯಿಟ್ಟಿತ್ತು. ಅದಕ್ಕೀಗ ಸರ್ಕಾರ ಒಪ್ಪಿಗೆ ನೀಡಿದೆ.
ಈ ಬಗ್ಗೆ ಕೇಂದ್ರ ಸಚಿವಾಲಯದಿಂದ ಮನಮೋಹನ್ ಸಿಂಗ್ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ವಯೋಸಹಜ ಖಾಯಿಲೆಗಳಿಂದಾಗಿ ಮೃತಪಟ್ಟ ಮನಮೋಹನ್ ಸಿಂಗ್ ಗೆ ಸ್ಮಾರಕ ನಿರ್ಮಿಸುವಂತೆ ಕಾಂಗ್ರೆಸ್ ಶ್ರದ್ಧಾಂಜಲಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಬಳಿಕ ಎಐಸಿಸಿ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರಕ್ಕೆ ಪತ್ರ ಬರೆದು ಈ ಬಗ್ಗೆ ಮನವಿ ಮಾಡಿದ್ದರು.
ಇಂದು ಬೆಳಿಗ್ಗೆ 11.45 ಕ್ಕೆ ಸಕಲ ಸರ್ಕಾರೀ ಗೌರವಗಳೊಂದಿಗೆ ಮನಮೋಹನ್ ಸಿಂಗ್ ಅಂತ್ಯಕ್ರಿಯೆ ದೆಹಲಿಯ ನಿಗಮ್ ಬೋಧ್ ಘಾಟ್ ನಲ್ಲಿ ನಡೆಯಲಿದೆ. ಇದೀಗ ಎಐಸಿಸಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.