ಭ್ರಷ್ಟಾಚಾರ, ಜಾತಿವಾದ, ಕೋಮುವಾದಕ್ಕೆ ಭಾರತದಲ್ಲಿ ಸ್ಥಾನವಿಲ್ಲ: ನರೇಂದ್ರ ಮೋದಿ

ಸೋಮವಾರ, 4 ಸೆಪ್ಟಂಬರ್ 2023 (10:38 IST)
ನವದೆಹಲಿ : ಸ್ವಾತಂತ್ರ್ಯದ 100 ನೇ ವರ್ಷಾಚರಣೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ಅದರಲ್ಲಿ ಭ್ರಷ್ಟಾಚಾರ, ಜಾತಿವಾದ, ಕೋಮುವಾದಕ್ಕೆ ಯಾವುದೇ ಸ್ಥಾನವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

2047 ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ. ಭ್ರಷ್ಟಾಚಾರ, ಜಾತಿಯತೆ ಮತ್ತು ಕೋಮುವಾದಕ್ಕೆ ನಮ್ಮ ರಾಷ್ಟ್ರೀಯ ಜೀವನದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಮೋದಿ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಕುರಿತು ಮಾತನಾಡಿದ ಪ್ರಧಾನಿ, ಮಾರ್ಗದರ್ಶನಕ್ಕಾಗಿ ಜಗತ್ತು ಈಗ ಭಾರತದತ್ತ ನೋಡುತ್ತಿದೆ. ನಮ್ಮ ಮಾತುಗಳು ಮತ್ತು ದೃಷ್ಟಿಯನ್ನು ಜಗತ್ತು ಭವಿಷ್ಯದ ಮಾರ್ಗಸೂಚಿಯಾಗಿ ನೋಡುತ್ತದೆ. ಇದು ಕೇವಲ ಕಲ್ಪನೆಗಳಲ್ಲ. ವಿಶ್ವದ ಜಿಡಿಪಿ-ಕೇಂದ್ರಿತ ದೃಷ್ಟಿಕೋನವು ಮಾನವ-ಕೇಂದ್ರಿತ ದೃಷ್ಟಿಕೋನವಾಗಿ ಬದಲಾಗುತ್ತಿದೆ. ಈ ಪರಿವರ್ತನೆಯಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಬಗೆಗಿನ ಪ್ರಪಂಚದ ಗ್ರಹಿಕೆ ಹೇಗೆ ಬದಲಾಗುತ್ತಿದೆ ಎಂಬುದನ್ನು ಒತ್ತಿ ಹೇಳಿದ ಮೋದಿ, ದೀರ್ಘಕಾಲದಿಂದ ಭಾರತವನ್ನು ಒಂದು ಶತಕೋಟಿ ಹಸಿದ ಹೊಟ್ಟೆಗಳ ದೇಶವನ್ನಾಗಿ ನೋಡಲಾಗುತ್ತಿತ್ತು. ಈಗ ಅದು ಒಂದು ಶತಕೋಟಿ ಮಹತ್ವಾಕಾಂಕ್ಷೆಯ ಮನಸ್ಸುಗಳು ಮತ್ತು ಎರಡು ಶತಕೋಟಿ ಕೌಶಲ್ಯಪೂರ್ಣ ಕೈಗಳ ದೇಶವಾಗಿದೆ ಎಂದು ಮಾತನಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ