ಮುಕ್ಕಾಲು ಕೆಜಿ ಚಿನ್ನ, ಐಷಾರಾಮಿ ಕಾರು ನೀಡಿದ ಬಳಿಕವೂ ವರದಕ್ಷಿಣೆ ಕಿರುಕುಳ: ನವವಿವಾಹಿತೆ ಸಾವಿಗೆ ಶರಣು

Sampriya

ಸೋಮವಾರ, 30 ಜೂನ್ 2025 (14:56 IST)
Photo Credit X
ತಿರುಪ್ಪೂರ್: ವರದಕ್ಷಿಣೆ ಕಿರುಕುಳದಿಂದ 27 ವರ್ಷದ ನವ ವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುಪ್ಪೂರ್ ನಲ್ಲಿ ನಡೆದಿದೆ. 

ಮಹಿಳೆಗೆ ಆಕೆಯ ಪತಿ, ಮಾವ ಹಾಗೂ ಅತ್ತೆ ಆಕೆಗೆ ಇನ್ನೂ ಹೆಚ್ಚು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಏಪ್ರಿಲ್‌ನಲ್ಲಿ ಕವಿನ್ ಕುಮಾರ್ (28) ಎಂಬಾತನೊಂದಿಗೆ ವಿವಾಹವಾಗಿದ್ದ ರಿಧನ್ಯಾ (27) ಆತ್ಮಹತ್ಯೆಗೆ ಶರಣಾಗಿರುವ ಮಹಿಳೆಯಾಗಿದ್ದಾರೆ.

ಮದುವೆಯ ಸಂದರ್ಭದಲ್ಲಿ ₹ 70 ಲಕ್ಷ ಮೌಲ್ಯದ ಕಾರು, 800 ಗ್ರಾಂ ಚಿನ್ನ ನೀಡಿದ ಬಳಿಕವೂ ವರದಕ್ಷಿಣೆಗಾಗಿ ಪತಿಯ ಮನೆಯವರು ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಮೊಂಡಿಪಾಳ್ಯಂದಲ್ಲಿರುವ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿ, ಮಾರ್ಗಮಧ್ಯೆ ಕಾರು ನಿಲ್ಲಿಸಿ, ಕೀಟನಾಶ ಸೇವಿಸಿದ್ದಾರೆ. ಬಹಳ ಹೊತ್ತಿನಿಂದ ಒಂದೇ ಪ್ರದೇಶದಲ್ಲಿ ಕಾರು ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿದಾಗ ಆಕೆಯ ಶವ ಪತ್ತೆಯಾಗಿದೆ. 
ಮೃತ ಮಹಿಳೆ ಗಾರ್ಮೆಂಟ್ಸ್ ಕಂಪನಿಯನ್ನು ನಡೆಸುತ್ತಿರುವ ಅಣ್ಣಾದೊರೈ ಅವರ ಮಗಳು ಎಂದು ತಿಳಿದುಬಂದಿದೆ.

ರಿಧನ್ಯಾ ಸಾಯುವ ಮುನ್ನ ತನ್ನ ತಂದೆಗೆ ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್‌ಗಳನ್ನು ಕಳುಹಿಸಿದ್ದಾರೆ. ಮೆಸೇಜ್‌ನಲ್ಲಿ ನನ್ನ ಈ ನಿರ್ಧಾರಕ್ಕಾಗಿ ಕ್ಷಮಿಸಿ, ಪ್ರತಿದಿನ ನನ್ನ ಪತಿ, ಅತ್ತೆ ಹಾಗೂ ಮಾವ ನೀಡುತ್ತಿರುವ ಕಿರುಕುಳ ತಾಳಲಾಗದೇ ಈ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ