ಮೋದಿ ದೂಷಣೆ ಫ್ಯಾಷನ್ ಆಗಿಬಿಟ್ಟಿದೆ : ವೆಂಕಯ್ಯ ನಾಯ್ಡು

ಶನಿವಾರ, 5 ನವೆಂಬರ್ 2016 (16:53 IST)
ದೇಶದಲ್ಲಿ ಎದುರಿಸುವ ಪ್ರತಿಯೊಂದು ಸಮಸ್ಯೆಗೂ ಪ್ರಧಾನಿ ಮೋದಿ ಅವರ ಮೇಲೆ ಆಪಾದನೆ ಹೊರಿಸುವುದು ಫ್ಯಾಷನ್ ಆಗಿ ಬಿಟ್ಟಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ವಿರೋಧ ಪಕ್ಷದ ಮೇಲೆ ಹರಿಹಾಯ್ದಿದ್ದಾರೆ.  
 
'ಏಕ ಶ್ರೇಣಿ ಏಕ ಪಿಂಚಣಿ' ಜಾರಿ ವಿಳಂಬಕ್ಕೆ ನೊಂದು ಯೋಧ ರಾಮ್ ಕಿಶನ್ ಗ್ರೇವಾಲ್ ಆತ್ಮಹತ್ಯೆ ಮಾಡಿಕೊಂಡ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೋದಿ ವಿರುದ್ಧ ಆರೋಪಕ್ಕೆ ಇಳಿದುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ ನಾಯ್ಡು, ಪ್ರಚಾರಕ್ಕಾಗಿ ಮೋದಿ ಹೆಸರನ್ನು ಎಲ್ಲ ವಿಷಯದಲ್ಲೂ ಎಳೆದು ತರಲಾಗುತ್ತಿದೆ ಎಂದಿದ್ದಾರೆ. 
 
ಮುಂದುವರೆದ ನಾಯ್ಡು ಈ ಮೊದಲು ಎಲ್ಲದ್ದಕ್ಕೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಡೆ ಬೆರಳು ತೋರಲಾಗುತ್ತಿತ್ತು. ಮತ್ತೀಗ ಎಲ್ಲದಕ್ಕೂ ಪ್ರಧಾನಿ ಮೋದಿಯನ್ನು ಗುರಿಯಾಗಿಸಲಾಗುತ್ತಿದೆ. ಮೊದಲು ಮಳೆಯಾಗದಿದ್ದರೂ, ಯಾರಿಗಾದರೂ ಮಕ್ಕಳಾಗದಿದ್ದರೂ ಸಂಘವನ್ನೇ ದೂರಲಾಗುತ್ತಿತ್ತು ಎಂದು ನಾಯ್ಡು ಕುಹಕವಾಡಿದ್ದಾರೆ. 
 
ಒಆರ್‌ಒಪಿ ಜಾರಿಗೆ ಕುರಿತಂತೆ ಸುಳ್ಳು ಹೇಳುವುದನ್ನು ನಿಲ್ಲಿಸಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು. 
 
ಪ್ರಧಾನಿ ಮೋದಿ ಅವರನ್ನು ನಿಂದಿಸಲು, ಅವರ ವರ್ಚಸ್ಸನ್ನು ಹಾಳುಗೆಡವಲು ರಾಹುಲ್ ಮತ್ತು ಕೇಜ್ರಿವಾಲ್ ಸ್ಪರ್ಧೆಗಿಳಿದಿದ್ದಾರೆ, ಎಂದು ಬಿಜೆಪಿ ಆರೋಪಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ