ಮಂಟಪಕ್ಕೆ ಬಂದು ವರನಿಗೆ ಆ್ಯಸಿಡ್ ಎರಚಿದ ಮಾಜಿ ಗೆಳತಿ!

ಗುರುವಾರ, 27 ಏಪ್ರಿಲ್ 2023 (08:54 IST)
ರಾಂಚಿ : ತನಗೆ ಪ್ರಾಮಿಸ್ ಮಾಡಿ ಬೇರೆ ಯುವತಿಯೊಡನೆ ಮದುವೆಯಾಗುತ್ತಿರುವುದನ್ನು ಕಂಡು 23ರ ಯುವತಿಯೊಬ್ಬಳು ತನ್ನ ಮಾಜಿ ಪ್ರಿಯಕರನಿಗೆ ಮದುವೆ ಮಂಟಪದಲ್ಲೇ ಆ್ಯಸಿಡ್ ಎರಚಿ, ಹಲ್ಲೆ ಮಾಡಿರುವ ಘಟನೆ ಛತ್ತಿಸ್ಗಢದಲ್ಲಿ ನಡೆದಿದೆ.
 
ಛತ್ತೀಸ್ಗಢದ ಛೋಟೆ ಅಮಾಬಲ್ ಗ್ರಾಮದಲ್ಲಿ ವಿವಾಹ ನಡೆಯುತ್ತಿದ್ದ ವೇಳೆ ಆ್ಯಸಿಡ್ ದಾಳಿ ನಡೆದಿದೆ. ದಾಳಿಯಲ್ಲಿ ವರ, ವಧು ಸೇರಿದಂತೆ 10ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗ್ರಾಮದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ದೃಶ್ಯಾವಳಿಯನ್ನು ಆಧಾರಿಸಿ ಬಸ್ತಾರ್ ಠಾಣಾ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ.

23ರ ಯುವತಿಯೊಂದಿಗೆ ಕಳೆದ ಹಲವು ವರ್ಷಗಳಿಂದ ದಮೃತ್ ಬಘೇಲ್ ಎಂಬಾತ ಸಂಬಂಧವನ್ನು ಹೊಂದಿದ್ದ. ಯುವತಿಯನ್ನು ಮದುವೆಯಾಗುವುದಾಗಿಯೂ ನಂಬಿಸಿ, ಮಾತು ಕೊಟ್ಟಿದ್ದ. ಆದ್ರೆ ಆಕೆಯನ್ನ ನಿರಾಕರಿಸಿ ಬೇರೊಬ್ಬಳು ಯುವತಿಯೊಂದಿಗೆ ಮದುವೆಯಾಗಲು ಮುಂದಾಗಿದ್ದ.

ಅವನ ಮದುವೆ ವಿಚಾರ ತಿಳಿದ ಮಾಜಿ ಪ್ರಿಯತಮೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಈ ನಡುವೆ ಕ್ರೈಂ ಸೀರಿಯಲ್ ನೋಡುತ್ತಿದ್ದ ಯುವತಿ ತನ್ನ ಮಾಜಿ ಪ್ರಿಯಕರನ ಮೇಲೆ ಆ್ಯಸಿಡ್ ದಾಳಿ ಮಾಡಲು ಪ್ಲ್ಯಾನ್ ಮಾಡಿದ್ದಾಳೆ.

ಕೊನೆಗೆ ಸೇಡು ತೀರಿಸಿಕೊಳ್ಳಲು ಯೋಚಿಸಿ, ತಾನು ಕೆಲಸ ಮಾಡುತ್ತಿದ್ದ ಮೆಣಸಿನಕಾಯಿ ಫಾರ್ಮ್ನಿಂದ ಆ್ಯಸಿಡ್ ಕದ್ದಿದ್ದಾಳೆ. ಅದಾದ ಬಳಿಕ ಮದುವೆ ಸಮಾರಂಭಕ್ಕೆ ಬಂದಿದ್ದ ಆಕೆ, ಮಾಜಿ ಪ್ರಿಯಕರನ ಮುಖಕ್ಕೆ ಆ್ಯಸಿಡ್ ಎರೆಚಿದ್ದಾಳೆ. ಘಟನೆಯ ಬಳಿಕ ಆಕೆ ಅಲ್ಲಿಂದ ಪರಾರಿಯಾಗಿದ್ದಾಳೆ. ಅಷ್ಟೇ ಅಲ್ಲದೇ ತನ್ನ ಗುರುತು ಯಾರಿಗೂ ತಿಳಿಯಬಾರದೆಂದು ಯುವಕನ ವೇಷದಲ್ಲಿ ಬಂದಿದ್ದಳು.

 
ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯ ನಂತರ ಪ್ಯಾಂಟ್ ಮತ್ತು ಸೂಟ್ ಧರಿಸಿದ್ದ ವ್ಯಕ್ತಿ ಓಡಿಹೋದ ಬಗ್ಗೆ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ