ಏರ್‌ ಇಂಡಿಯಾ ದುರಂತ ಬೆನ್ನಲ್ಲೇ ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ: ಪೈಲಟ್ ಸೇರಿ 7 ಮಂದಿ ಸಾವು

Sampriya

ಭಾನುವಾರ, 15 ಜೂನ್ 2025 (10:17 IST)
Photo Courtesy X
ಡೆಹ್ರಾಡೂನ್: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನದ ಕರಾಳ ನೆನಪು ಮಾಸುವ ಮುನ್ನವೇ ಉತ್ತರಾಖಂಡದ ಕೇದಾರನಾಥ ದೇವಾಲಯದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೆ ತುತ್ತಾಗಿದೆ. ಅದರಲ್ಲಿದ್ದ ಪೈಲಟ್ ಸೇರಿ ಅದರಲ್ಲಿದ್ದ 7 ಮಂದಿ ಸಾವಿಗೀಡಾಗಿದ್ದಾರೆ.

ಗೌರಿಕುಂಡ ಬಳಿಯ ಅರಣ್ಯದಲ್ಲಿ ಅಪಘಾತ ಸಂಭವಿಸಿದೆ. ಇದಕ್ಕೆ ಪ್ರತಿಕೂಲ ಹವಾಮಾನ ಕಾರಣ ಎಂದು ಹೇಳಲಾಗಿದೆ. ಇಂದು ಬೆಳಿಗ್ಗೆ 5:30ರ ಸುಮಾರಿಗೆ ಕೇದಾರನಾಥದಿಂದ ಗುಪ್ತಕಾಶಿಗೆ ಹೊರಟಿದ್ದ ಹೆಲಿಕಾಪ್ಟರ್ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿದೆ.

ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ 241 ಜನರು ಸೇರಿ 271 ಮಂದಿ ಮೃತಪಟ್ಟು ಕೆಲವು ದಿನಗಳ ನಂತರ ಮತ್ತೊಂದು ಅವಘಡ ಸಂಭವಿಸಿದೆ.

ಹೆಲಿಕಾಪ್ಟರ್‌ನಲ್ಲಿದ್ದ ಪ್ರಯಾಣಿಕರು ಉತ್ತರಾಖಂಡ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್‌ನವರು. ಪರಿಹಾರ ಮತ್ತು ರಕ್ಷಣಾ ಕಾರ್ಯದ ದೃಷ್ಟಿಯಿಂದ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ಘಟನೆಯ ಸ್ಥಳಕ್ಕೆ ರವಾನಿಸಲಾಗಿದೆ.

ಆರ್ಯನ್ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಹೆಲಿಕಾಪ್ಟರ್ ಕೇದಾರಘಾಟಿಯ ಗೌರಿಕುಂಡ ಮತ್ತು ತ್ರಿಜುಗಿನಾರಾಯಣ್ ನಡುವಿನ ಅರಣ್ಯದಲ್ಲಿ ಪತನವಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರತಿಕ್ರಿಯಿಸಿ, ಕೇದಾರನಾಥ ದೇವಾಲಯದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಇತರ ಸಂಸ್ಥೆಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ