ಜಮ್ಮು ಕಾಶ್ಮೀರ: ಕಳೆದ ವರ್ಷ ಇದೇ ದಿನ ಪೆಹಲ್ಗಾಮ್ ನಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕರು ಭೀಕರ ದಾಳಿ ನಡೆಸಿ 26 ಹಿಂದೂ ನಾಗರಿಕರನ್ನು ಕೊಂದು ಹಾಕಿದ್ದರು. ಈ ಹೇಯ ಕೃತ್ಯಕ್ಕೆ ಇಂದು ವರ್ಷವಾಗಿದ್ದು, ಇದೀಗ ಪ್ರವಾಸಿಗರು ಅಲ್ಲಿಗೆ ಬರುತ್ತಿದ್ದಾರಾ, ಸೆಕ್ಯುರಿಟಿ ಹೇಗಿದೆ ಇಲ್ಲಿದೆ ವಿವರ.
ಪೆಹಲ್ಗಾಮ್ ನ ಬೈಸರಣ್ ಹುಲ್ಲುಗಾವಲಿನ ಮೇಲೆ ತಮ್ಮ ಕುಟುಂಬದವರ ಜೊತೆ ಸಂತೋಷವಾಗಿ ಕಾಲ ಕಳೆಯುತ್ತಿದ್ದ ಭಾರತೀಯ ಮುಗ್ಧ ನಾಗರಿಕರ ಮೇಲೆ ಅಡವಿ ಕಡೆಯಿಂದ ಬಂದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿ ಹತ್ಯಾಕಾಂಡ ನಡೆಸಿದ್ದರು.
ಈ ದಾಳಿ ಬಳಿಕ ಕಾಶ್ಮೀರ ಪ್ರವಾಸ ಮಾಡಲು ಜನ ಹಿಂದೇಟು ಹಾಕುತ್ತಿದ್ದರು. ಇದರಿಂದ ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಜಮ್ಮು ಕಾಶ್ಮೀರ ಜನರಿಗೆ ಕೊಂಚ ಹೊಡೆತ ನೀಡಿತ್ತು. ಆದರೆ ಈ ಘಟನೆಯಾದ ಬಳಿಕ ಕಾಶ್ಮೀರದಲ್ಲಿ ಪ್ರವಾಸೀ ತಾಣಗಳಿಗೆ ಭದ್ರತೆ ಹೆಚ್ಚಿಸಲಾಯಿತು. ಇದಾದ ಬಳಿಕ ತುಲಿಪ್ ಗಾರ್ಡನ್ ಸೇರಿದಂತೆ ಇತರೆ ಜಾಗಗಳಿಗೆ ಜನ ಮತ್ತೆ ಬರಲು ಅರಂಭಿಸಿದ್ದರು.
ಇದೀಗ ಪೆಹಲ್ಗಾಮ್ ಗೂ ನಿತ್ಯವೂ ಸಾಕಷ್ಟು ಜನ ಭೇಟಿ ನೀಡುತ್ತಿದ್ದಾರೆ. ಅಂದಿನ ಕಹಿ ಘಟನೆ ಬಳಿಕ ಇಲ್ಲಿ ಭದ್ರತಾ ಸಿಬ್ಬಂದಿ ಗಸ್ತು ಹೆಚ್ಚಿಸಲಾಗಿದೆ. ಈ ಸ್ಥಳದಲ್ಲಿ ಸಿಆರ್ ಪಿಎಫ್ ಯೋಧರು ಮತ್ತು ಸ್ಥಳೀಯ ಪೊಲೀಸರು ಸದಾ ಗಸ್ತು ತಿರುಗುತ್ತಿರುತ್ತಾರೆ. ಇಲ್ಲಿನ ಸಿಬ್ಬಂದಿಗಳಿಗೆ ಕ್ಯೂ ಆರ್ ಕೋಡ್ ಆಧಾರಿತ ದೃಢೀಕರಣ ನೀಡಲಾಗಿದೆ. ಎಂಟ್ರಿ ಪಾಯಿಂಟ್ ಗಳಲ್ಲಿ ಭದ್ರತೆ ನಿಯೋಜಿಸಲಾಗಿದೆ. ಇದೀಗ ಪೆಹಲ್ಗಾಮ್ ದಾಳಿಗೆ ಒಂದು ವರ್ಷವಾದ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕಾಶ್ಮೀರದ ಪ್ರವಾಸೀ ತಾಣಗಳಲ್ಲಿ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದ್ದು ಯೋಧರು ಕಟ್ಟೆಚ್ಚರ ವಹಿಸಿದ್ದಾರೆ.