ಲಾಲು ಯಾದವ್ ಮೇಲೆ ಬಿತ್ತು ಮತ್ತೊಂದು ಇಡಿ ಕೇಸ್

ಗುರುವಾರ, 27 ಜುಲೈ 2017 (18:45 IST)
ಮುಖ್ಯಮಂತ್ರಿ ನಿತೀಶ್ ಕುಮಾರ್ ಯಾದವ್ ಮಹಾಮೈತ್ರಿಕೂಟಕ್ಕೆ ಕೈಕೊಟ್ಟು ಎನ್‌ಡಿಎ ತೆಕ್ಕೆಗೆ ಸೇರಿರುವುದನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿರುವ ಲಾಲು ಯಾದವ್‌ಗೆ, ಇದೀಗ ಜಾರಿ ನಿರ್ದೇಶನಾಲಯ ಲಾಲು ವಿರುದ್ಧ ಮತ್ತೊಂದು ಕೇಸ್ ದಾಖಲಿಸಿದೆ.   
 
ಲಾಲು ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ, ರೈಲ್ವೆ ಹೋಟೆಲ್ ಹಂಚಿಕೆಯಲ್ಲಿ ಅವ್ಯವಹಾರ ನಡೆದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣದಲ್ಲಿ ಹಣ ದುರುಪಯೋಗವಾಗಿರುವ ಕುರಿತು ಜಾರಿ ನಿರ್ದೇಶನಾಲಯ ಲಾಲು ವಿರುದ್ಧ ಕೇಸ್ ದಾಖಲಿಸಿದೆ.  
 
ಕಳೆದ ತಿಂಗಳು ಸಿಬಿಐ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲು ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಲಾಲು ಪುತ್ರ ತೇಜಸ್ವಿ ಯಾದವ್‌ರನ್ನು ಸಂಶಯಾತ್ಮಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತ್ತು. ಸಿಬಿಐ ದಾಳಿ ನೆಪದಲ್ಲಿ ಆರ್‌ಜೆಡಿ ಮತ್ತು ಜೆಡಿಯು ಪಕ್ಷಗಳ ಮೈತ್ರಿಕೂಟವನ್ನು ಛಿದ್ರಗೊಳಿಸಿದ ಸಿಎಂ ನಿತೀಶ್ ಕುಮಾರ್ ಎನ್‌ಡಿಎ ತೆಕ್ಕೆಗೆ ಸೇರ್ಪಡೆಗೊಂಡಿದ್ದಾರೆ.  
 
ನಿನ್ನೆ ಸಂಜೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್ ಕುಮಾರ್, ಇಂದು ಬೆಳಿಗ್ಗೆ 10 ಗಂಟೆಗೆ ಬಿಜೆಪಿ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ನಿತೀಶ್ ಕ್ರಮ ಯಾದವ್ ಕುಟುಂಬಕ್ಕೆ ನೀಡಿದ ದೊಡ್ಡ ಆಘಾತ ಎಂದು ಬಿಂಬಿಸಲಾಗಿದೆ. 
 
ಆರಂಭಿಕ ಸಿಬಿಐ ತನಿಖೆ ವರದಿ ಆಧರಿಸಿ ಹಣ ದುರುಪಯೋಗ ಕಾಯ್ದೆಯಡಿ ಲಾಲು ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ