ಜಯಲಲಿತಾರ ಕೊಡನಾಡ್ ಎಸ್ಟೇಟ್ ನಲ್ಲಿ 4ನೇ ಸಾವು: ಅಕೌಂಟಂಟ್ ಶವ ಪತ್ತೆ

ಮಂಗಳವಾರ, 4 ಜುಲೈ 2017 (11:13 IST)
ಊಟಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ. ಜಯಲಲಿತಾ ಅವರ ಒಡೆತನದ ಕೊಡನಾಡ್‌ ಎಸ್ಟೇಟ್‌ನಲ್ಲಿನ ನಿಗೂಢ ಸಾವಿನ ಸರಣಿ ಮುಂದುವರೆದಿದ್ದು, ಎಸ್ಟೇಟ್ ಗೆ ಸೇರಿದ ಅಕೌಂಟಂಟ್‌ ದಿನೇಶ್‌ ಕುಮಾರ್‌ (28ವರ್ಷ)  ಎಂಬುವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
 
ಈ ಮೂಲಕ ಕೊಡನಾಡ್‌ ಎಸ್ಟೇಟ್‌ ನಲ್ಲಿ ಸಂಭವಿಸಿರುವ ಸಾವಿನ ಸಂಖ್ಯೆ 4ಕ್ಕೇರಿಕೆಯಾಗಿದೆ. ಜಯಲಲಿತಾ ಅವರು ಕೊಡನಾಡ್‌ ಎಸ್ಟೇಟ್‌ ನ ಮೂರು ಮಂದಿ ಅಕೌಂಟೆಂಟ್‌ ಗಳ ಪೈಕಿ  ದಿನೇಶ್‌ ಕೂಡಾ ಒಬ್ಬರಾಗಿದ್ದರು. ದಿನೇಶ್ ಅವರ ಶವ ಕೊಥಗಿರಿಯ ಅವರ ನಿವಾಸದಲ್ಲಿ ಫ್ಯಾನ್‌ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಹೇಳಲಾಗಿದೆ.
 
ಈ ಕುರಿತು ಊಟಿ ಎಸ್ ಪಿ ಮುರಳಿ ರಂಬಾ ಪ್ರತಿಕ್ರಿಯಿಸಿದ್ದು, ಕಳೆದ 15 ದಿನಗಳಿಂದ ಅಕೌಂಟೆಂಟ್ ದಿನೇಶ್ ಕೆಲಸಕ್ಕೆ ಹೋಗಿರಲಿಲ್ಲ. ಅನಾರೋಗ್ಯದ ಕಾರಣದಿಂದ ರಜೆಯಲ್ಲಿದ್ದ ಎಂದು ತಿಳಿಸಿದ್ದಾರೆ.  ಇನ್ನು ದಿನೇಶ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಅವರ ತಾಯಿ ಹಾಗೂ ತಂಗಿ ಮೊದಲು ನೋಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ ಅಷ್ಚು ಹೊತ್ತಿಗಾಗಲೇ ದಿನೇಶ್ ಸಾವನ್ನಪ್ಪಿದ್ದ ಎಂದು ವೈದ್ಯರು  ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ