ಕರ್ನಾಟಕವನ್ನು ಗೋವಾದ ‘ಹಿರಿಯಣ್ಣ’ ಎಂದು ಬಣ್ಣಿಸಿರುವ ಅಲ್ಲಿನ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಮಹಾದಾಯಿ ನದಿ ನೀರು ವಿವಾದಕ್ಕೆ ಸಂಬಂಧಿಸಿ ನಾವು ನೆರೆಯ ರಾಜ್ಯವನ್ನು ಶತ್ರುವಿನಂತೆ ನೋಡುವುದಿಲ್ಲ ಎಂದಿದ್ದಾರೆ.
ಕರ್ನಾಟಕ ನಮ್ಮ ದೊಡ್ಡಣ್ಣನಿದ್ದಂತೆ. ನೀರು ಹಂಚಿಕೆ ಸಮಸ್ಯೆಗೆ ಸಂಬಂಧಿಸಿದಂತೆ ಅವರನ್ನು ಶತ್ರುವಿನಂತೆ ಕಾಣುವುದಿಲ್ಲ. ನಿಸ್ಸಂದೇಹವಾಗಿ ಕೆಲವು ರಾಜಕೀಯ ಶಕ್ತಿಗಳು ಉದ್ವಿಗ್ನ ಸ್ಥಿತಿ ನಿರ್ಮಿಸಲು ಮತ್ತು ಜನರನ್ನು ಪ್ರಚೋದಿಸಲು ಯತ್ನಿಸುತ್ತಿವೆ. ನಾವದಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ, ಎಂದು ಪರ್ಸೇಕರ್ ಹೇಳಿದ್ದಾರೆ.
ಕರ್ನಾಟಕದಲ್ಲಿರುವ ಗೋವಾದ ಜನರ ಸುರಕ್ಷತೆ ಬಗ್ಗೆ ವಿಧಾನಸಭೆಯಲ್ಲಿ ಪಕ್ಷೇತರ ಶಾಸಕ ರೋಹನ್ ಖಾಂತೆ ಅವರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಹಾದಾಯಿ ನೀರು ಹಂಚಿಕೆ ನ್ಯಾಯಮಂಡಳಿಯ ಮಧ್ಯಂತರ ತೀರ್ಪಿನಿಂದ ಕರ್ನಾಟಕದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ನಾವು ನಾಗರಿಕ ಜನರು ಮತ್ತು ಅದಕ್ಕೆ ತಕ್ಕಂತೆ ನಡೆದುಕೊಳ್ಳಲಿದ್ದೇವೆ ಎಂದಿದ್ದಾರೆ.
ಗೋವಾ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರು ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕರ್ನಾಟಕದಲ್ಲಿರುವ ಗೋವೆಯನ್ನರಿಗೆ ಯಾವುದೇ ರೀತಿಯ ಅಸುರಕ್ಷತೆ ಸಮಸ್ಯೆ ಇಲ್ಲ. ಕರ್ನಾಟಕ ಸರ್ಕಾರ ತಮ್ಮ ರಾಜ್ಯದಲ್ಲಿರುವ ಗೋವೆಯನ್ನರ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಎಂಬ ಎಂಬ ಭರವಸೆ ನನಗಿದೆ ಎಂದವರು ಹೇಳಿದ್ದಾರೆ.
ಇದನ್ನು ಅಂತರರಾಜ್ಯ ಕದನವಾಗಿ ಮಾರ್ಪಡಿಸುವುದು ಬೇಡ. ಇದು ಒಂದು ನಿರ್ದಿಷ್ಟ ವಿಷಯದ ಬಗೆಗಿನ ಕಾನೂನು ಹೋರಾಟ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಎರಡು- ಮೂರು ದಿನಗಳ ಕಾಲ ಗೋವಾದಿಂದ ಕರ್ನಾಟಕಕ್ಕೆ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.