ಪ್ರತೀಕಾರ: ಪತ್ನಿ ಸಮ್ಮುಖದಲ್ಲಿ ತಲೆ ಕತ್ತರಿಸಿ ರಸ್ತೆಗೆಸೆದರು

ಬುಧವಾರ, 17 ಆಗಸ್ಟ್ 2016 (13:49 IST)
ಸ್ವಂತ ಅಳಿಯನನ್ನು ಕೊಂದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಬರ್ಬರವಾಗಿ ಕೊಲೆ ಮಾಡಿದ ಹೇಯ ಘಟನೆ ಮಧುರೈನಲ್ಲಿ ನಡೆದಿದೆ. ಈ ಬೀಭತ್ಸ ದೃಶ್ಯವನ್ನು ಅಲ್ಲಿ ನೆರೆದ ಹಲವರು ವೀಕ್ಷಿಸಿದ್ದಾರೆ.
 
ಮೃತನನ್ನು ಅಲಗುರಾಜಾ ಎಂದು ಗುರುತಿಸಲಾಗಿದ್ದು ಮಧುರೈನ ನಿಲಕೊಟ್ಟೈ ನಿವಾಸಿಯಾಗಿರುವ ಈತ ಹಂದಿಮರಿಗಳನ್ನು ಸಾಕಿ, ಅದನ್ನು ಮಾರಿ ಜೀವನ ನಡೆಸುತ್ತಿದ್ದ. ಸಂಬಂಧಿಕನೊಬ್ಬನ ಅಂತ್ಯ ಸಂಸ್ಕಾರಕ್ಕೆ ಆಗಸ್ಟ್ 14 ರಂದು ಪತ್ನಿ ಜತೆ ತಿರುಮಂಗಲಮ್‌ಗೆ ಹೋಗಿದ್ದ ಆತ ಅಲ್ಲಿಂದ ಮರಳುವಾಗ ಅಂಗಡಿಯೊಂದಕ್ಕೆ ಹೊಕ್ಕಿದ್ದಾನೆ. ಆಗ ಮೋಟಾರ್‌ಬೈಕ್‌ಲ್ಲಿ ಅಲ್ಲಿಗೆ ಬಂದ ನಾಲ್ವರು ಆತನ ಮೇಲೆ ಏಕಾಏಕಿ ದಾಳಿ ನಡೆಸಿ ಪತ್ನಿಯ ಮುಂದೆಯೇ ತಲೆ ಕತ್ತರಿಸಿ ರಸ್ತೆಗೆಸೆದಿದ್ದಾರೆ. 
 
ಕೊಲೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ನಾಗೇಶ್ ವ್ಯಾಪಾರದಲ್ಲಿ ಅಲಗುರಾಜನ ಪ್ರತಿಸ್ಪರ್ಧಿಯಾಗಿದ್ದ. ಆತನ ಅಳಿಯ ಕಳೆದ ಕೆಲ ವಾರದ ಹಿಂದೆ ಹತ್ಯೆಯಾಗಿದ್ದು, ಈ ಕೃತ್ಯದಲ್ಲಿ ಅಲಗುರಾಜನ ಪಾತ್ರವಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರತೀಕಾರವಾಗಿ ಹತ್ಯೆಗೈಯ್ಯಲಾಗಿದೆ. ದಾಳಿಕೋರರಲ್ಲಿ ಮೃತನ ಸಂಬಂಧಿ ಕೂಡ ಇದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. 
 
ಮೃತನ ಪತ್ನಿ ಥೇನುಗೂ ಸಣ್ಣಪುಟ್ಟ ಗಾಯಗಳಾಗಿದ್ದು, ನಾಗೇಶನ ಅಳಿಯನ ಕೊಲೆಗೆ ಸಂಬಂಧಿಸಿದಂತೆ  ಪತಿಯನ್ನು ಮತ್ತು ಇತರ ನಾಲ್ವರನ್ನು ಶಂಕೆಯ ಮೇಲೆ ಬಂಧಿಸಲಾಗಿತ್ತು. ಬಳಿಕ ನನ್ನ ಪತಿಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ನನ್ನ ಪತಿಯೇ ಕೊಲೆಗೈದಿದ್ದಾನೆ ಎಂದು ಬಗೆದು ಈ ಕೃತ್ಯವನ್ನೆಸಗಲಾಗಿದೆ ಎಂದಾಕೆ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ