ಬಿಜೆಪಿ ಸಂಸದನ ಮೇಲೆ ಕೊಲೆ ಆರೋಪ ಹೊರಿಸಿದ ಕೇಜ್ರಿವಾಲ್

ಸೋಮವಾರ, 20 ಜೂನ್ 2016 (09:50 IST)
ತಮ್ಮ ಪಕ್ಷದ 21 ಶಾಸಕರಿಗೆ ಲಾಭದಾಯಕ ಹುದ್ದೆ ನೀಡಿದ ಆರೋಪದಿಂದ ಮುಜುಗರಕ್ಕೀಡಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಿಜೆಪಿ ಸಂಸದ ಮಹೇಶ್ ಗಿರಿ ಮತ್ತು ಉಪ ರಾಜ್ಯಪಾಲ ನಜೀಬ್ ಜಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
 
ಬಿಜೆಪಿ ಸಂಸದ ಮಹೇಶ್ ಗಿರಿ ಕೊಲೆ ಆರೋಪಿಯಾಗಿದ್ದು ಅವರನ್ನು ತಕ್ಷಣ ಬಂಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
 
ಪತ್ರ ಮುಖೇನ ನಜೀಬ್ ಜಂಗ್ ಅವರ ಮೇಲೆ ಆರೋಪ ಹೊರಿಸಿರುವ ಕೇಜ್ರಿವಾಲ್ ಎಮ್ಎಮ್ ಖಾನ್ ಹತ್ಯಾಕಾಂಡದಲ್ಲಿ ನೀವು ಎನ್‌ಡಿಎಮ್‌ಸಿ ಉಪಾಧ್ಯಕ್ಷ ಕರಣ್ ಸಿಂಗ್ ತಂವರ್ ಮತ್ತು ಬಿಜೆಪಿ ಸಂಸದ ಮಹೇಶ್ ಗಿರಿ ಅವರನ್ನು ಪೊಲೀಸ್ ವಿಚಾರಣೆಯಿಂದ ರಕ್ಷಿಸಿದ್ದೀರಿ ಎಂದು ಕಿಡಿಕಾರಿದ್ದಾರೆ.
 
ಇತ್ತೀಚಿನ ದಿನಗಳಲ್ಲಿ ನಿಮ್ಮ ಬಗ್ಗೆ ಮೋದಿ ಬಹಳ ಖುಷಿಯಾಗಿದ್ದಾರೆ ಎಂದು ಕೇಳಿಪಟ್ಟೆ. ಎಮ್ಎಮ್ ಖಾನ್ ಹತ್ಯಾಕಾಂಡದಲ್ಲಿ ಬಿಜೆಪಿಯ ಹಾಲಿ ಸಂಸದ ಮಹೇಶ್ ಗಿರಿ ಮತ್ತು ಮಾಜಿ ಶಾಸಕ ಕರಣ್ ಸಿಂಗ್ ತಂವರ್ ಬಹುವಾಗಿ ಕೇಳಿ ಬರುತ್ತಿದೆ. ನೀವು ಬಹಳ ಚಾಲಾಕಿತನದಿಂದ ಪೊಲೀಸರ ಬಳಿ ಮಾತನಾಡಿ ಅವರನ್ನು ರಕ್ಷಿಸಿದ್ದೀರಿ. ಬಿಜೆಪಿಯವರು ಎಷ್ಟು ಗೂಂಡಾಗಿರಿ ಮಾಡಿದರೂ ಅವರ ಕೂದಲನ್ನು ಅಲ್ಲಾಡಿಸಲಾಗುವುದಿಲ್ಲ ಎಂದು ಪ್ರಧಾನಿ ಮೋದಿಯವರಿಗೆ ಈಗ ಖಚಿತವಾಗಿರಬೇಕು. ನೀವು ಅವರನ್ನು ರಕ್ಷಿಸುತ್ತೀರಿ ಮತ್ತು ಆಪ್‌ ಪಕ್ಷದವರನ್ನು ಸುಳ್ಳು ಪ್ರಕರಣ ಜಡಿದು ಸಿಕ್ಕಿಸಿ ಹಾಕುತ್ತಿರಿ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. 
 
ನನ್ನ ಮೇಲಿನ ಆರೋಪವನ್ನು ಸಾಬೀತು ಮಾಡಿದರೆ ನಾನು ರಾಜಕಾರಣನ್ನು ಬಿಟ್ಟು ಬಿಡುತ್ತೇನೆ ಎಂದು ಸವಾಲು ಹಾಕಿರುವ ಗಿರಿ ಅರವಿಂದ ಕೇಜ್ರಿವಾಲ್ ಮನೆ ಎದುರು ಧರಣಿಗೆ ಕುಳಿತಿದ್ದಾರೆ. ಕೇಜ್ರಿವಾಲ್ ನನ್ನ ಮೇಲೆ ಹೊರಿಸಿರುವ ಆರೋಪವನ್ನು ಸಾಬೀತು ಪಡಿಸಲಿ, ಇಲ್ಲವಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಅವರು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ