ರಾಹುಲ್ ಗಾಂಧಿ ವಿರುದ್ಧ ನಾಲಿಗೆ ಹರಿಬಿಡಬೇಡಿ: ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ

Krishnaveni K

ಬುಧವಾರ, 18 ಸೆಪ್ಟಂಬರ್ 2024 (12:23 IST)
ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ಇತ್ತೀಚೆಗೆ ಎನ್ ಡಿಎ ನಾಯಕರು ನೀಡಿರುವ ಹೇಳಿಕೆ ಆಕ್ಷೇಪಾರ್ಹವಾಗಿದೆ. ಅಂತಹ ಹೇಳಿಕೆ ನೀಡದಂತೆ ನೀವೇ ನಿರ್ದೇಶಿಸಿ ಎಂದು ಪ್ರಧಾನಿ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ.

ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರದ ಎನ್ ಡಿಎ ನಾಯಕರೊಬ್ಬರು ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಇನ್ನೊಬ್ಬ ಬಿಜೆಪಿ ಮುಖಂಡ ದೆಹಲಿಯಲ್ಲಿ ಅಜ್ಜಿ ಇಂದಿರಾ ಗಾಂಧಿಗಾದ ಸ್ಥಿತಿಯೇ ರಾಹುಲ್ ಗೆ ಆಗುತ್ತದೆ ಎಂದಿದ್ದರು. ಈ ಹೇಳಿಕೆಗಳು ಅಸಭ್ಯ ಮತ್ತು ಆಕ್ಷೇಪಾರ್ಹವಾಗಿದೆ. ಇಂತಹ ಹೇಳಿಕೆಗಳನ್ನು ನೀಡದಂತೆ ನಿಮ್ಮ ಎನ್ ಡಿಎ ಮೈತ್ರಿಕೂಟದ ಸದಸ್ಯರಿಗೆ ತಿಳಿ ಹೇಳಿ ಎಂದು ಮೋದಿಗೆ ಖರ್ಗೆ ಪತ್ರ ಬರೆದಿದ್ದಾರೆ.

ಭಾರತೀಯ ಸಂಸ್ಕೃತಿ ಸೌಹಾರ್ದತೆ ಮತ್ತು ಪ್ರೀತಿಗೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಆದರೆ ಆಡಳಿತಾರೂಢ ಪಕ್ಷದಲ್ಲಿರುವ ಕೆಲವು ಸದಸ್ಯರ ಹೇಳಿಕೆಗಳು ಅತ್ಯಂತ ಕೀಳುಮಟ್ಟದ್ದಾಗಿದೆ. ಕೆಲವರು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ.

ಇಂತಹವರಿಂದಾಗಿಯೇ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಬೇಕಾಯಿತು. ದಯವಿಟ್ಟು ನಿಮ್ಮ ನಾಯಕರ ಮೇಲೆ ಶಿಸ್ತು ಮತ್ತು ಕ್ರಮವನ್ನು ಕೈಗೊಳ್ಳಬೇಕೆಂದು ನಾನು ಈ ಮೂಲಕ ವಿನಂತಿಸುತ್ತೇನೆ ಎಂದು ಮಲ್ಲಿಕಾರ್ಜು ಖರ್ಗೆ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ