ಪಿಎಂ ಮೋದಿ, ಯೋಗಿ ಅವಧಿಯಲ್ಲಿ ಕೋಮುಗಲಭೆಗಳಲ್ಲಿ ಹೆಚ್ಚಳ: ಮುಲಾಯಂ

ಸೋಮವಾರ, 25 ಸೆಪ್ಟಂಬರ್ 2017 (13:23 IST)
ಪ್ರಧಾನಮಂತ್ರಿ  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಉತ್ತರಪ್ರದೇಶದ ಸಿಎಂ ಯೋಗಿ ಸರಕಾರದ ಅವಧಿಯಲ್ಲಿ ಕೋಮುಗಲಭೆಗಳಲ್ಲಿ ಹೆಚ್ಚಳವಾಗಿವೆ ಎಂದು ಸಮಾಜವಾದಿ ಪಕ್ಷದ ಮಾಜಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಾಗ್ದಾಳಿ ನಡೆಸಿದ್ದಾರೆ. 

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಗಳು ಸುರಕ್ಷಿತವಾಗಿಲ್ಲ. ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕುಸಿದುಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ವಿದ್ಯಾರ್ಥಿನಿಯನ್ನು ಚುಡಾಯಿಸಲು ಕೆಲವರು ಯತ್ನಿಸಿದ ಘಟನೆಯ ನಂತರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ಹಿಂಸಾಚಾರ ಉಲ್ಬಣಗೊಂಡಿದೆ. ಹಲವಾರು ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಒಂದು ಸಾವಿರ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಿದರು.
 
ಮೋದಿ ಸರಕಾರದ ನೋಟು ನಿಷೇಧ ಕಾರ್ಯಕ್ರಮದಿಂದಾಗಿ ಜನತೆ ಆರ್ಥಿಕತೆಯಿಂದ ತತ್ತರಿಸುವಂತಾಯಿತು. ಕಷ್ಟಪಟ್ಟು ದುಡಿದ ಹಣವನ್ನು ಸರಕಾರಕ್ಕೆ ನೀಡುವಂತಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.
 
ನಾನು ಮುಖ್ಯಮಂತ್ರಿಯಾಗಿದ್ದಾಗ ಜನರಿಗೆ ಉದ್ಯೋಗಾವಕಾಶ ನೀಡಿದ್ದೇನೆ. ಆದರೆ ಈಗ ಉದ್ಯೋಗ ಸೃಷ್ಟಿಗೆ ಏನಾಗುತ್ತಿದೆ? ಉದ್ಯೋಗ ಸೃಷ್ಟಿಯ ಪ್ರಯತ್ನವೇ ನಡೆಯುತ್ತಿಲ್ಲ. ಗ್ರಾಮಗಳನ್ನು ಮರೆತುಬಿಡಿ. ರಾಜಧಾನಿ ಲಕ್ನೋ ನಗರ ಸಹ ನಿರಂತರ ವಿದ್ಯುತ್ ಸರಬರಾಜು ಪಡೆಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.
 
ತಂದೆಯಾಗಿ ನನ್ನ ಆಶೀರ್ವಾದ ಸದಾ ಅಖಿಲೇಶ್ ಅವರೊಂದಿಗಿರುತ್ತದೆ. ಆದರೆ, ಅವನು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ನನ್ನ ಸಮ್ಮತಿಯಿಲ್ಲ. ಹೊಸ ಪಕ್ಷ ಕಟ್ಟುತ್ತೇನೆ ಎನ್ನುವ ವರದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ