ಮೋದಿ ವಾಜಪೇಯಿಯವರನ್ನು ಕೂಡ ಹೊರ ಹಾಕುತ್ತಿದ್ದರು : ರಾಹುಲ್ ಗಾಂಧಿ

ಸೋಮವಾರ, 21 ಏಪ್ರಿಲ್ 2014 (12:55 IST)
ಬಿಜೆಪಿಯ ಹಿರಿಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಜೀವನದಲ್ಲಿ ಮುಂದುವರೆಯುತ್ತಿದ್ದಿದ್ದರೆ ಜಸ್ವಂತ್ ಸಿಂಗ್ ಹಾಗೂ ಆಡ್ವಾಣಿಯವರನ್ನು ಮೂಲೆಗುಂಪು ಮಾಡಿದ್ದಂತೆ ಮೋದಿಯವರು  ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕೂಡ ಅದೇ ಸ್ಥಿತಿಗೆ ತಳ್ಳುತ್ತಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮೇಲೆ ಕಟುವಾದ ವಾಗ್ದಾಳಿ ಮಾಡಿದ್ದಾರೆ.

"ನನ್ನನ್ನು ದೇಶದ ಕಾವಲುಗಾರನನ್ನಾಗಿ ಮಾಡಿ ಎಂದು ಹೇಳಿಕೊಂಡಿದ್ದ ಮೋದಿ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಕೇವಲ ಉದ್ದಿಮೆದಾರರಿಗೆ ಮಾತ್ರ ಕಾವಲುಗಾರರು. ಪಕ್ಷದ ಹಿರಿಯ ನಾಯಕರನ್ನು  ಪದಚ್ಯುತಗೊಳಿಸಿರುವ ಅವರು ಕೇವಲ ಅದಾನಿಯನ್ನು ಮೇಲಕ್ಕೆ ತಂದಿದ್ದಾರೆ" ಎಂದು  ಆರೋಪಿಸಿದರು. 
 
"ಅವರು (ಮೋದಿ) ಗುಜರಾತ್‌ಲ್ಲಿ ಅಭಿವೃದ್ಧಿಯನ್ನು ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಗುಜರಾತ್ ಒಬ್ಬ ವ್ಯಕ್ತಿಯಿಂದ ಬದಲಾವಣೆಯನ್ನು ಕಂಡಿಲ್ಲ. ಕಠಿಣ ಪರಿಶ್ರಮ ಮಾಡಿದ ಕಾರ್ಮಿಕರು ಮತ್ತು ಕೃಷಿಕರು ಗುಜರಾತ ರಾಜ್ಯವನ್ನು ಅಭಿವೃದ್ಧಿಪಡಿಸಿದ್ದಾರೆ" ಎಂದರು.

"ಅವರು ದೇಶವನ್ನು ನಿಯಂತ್ರಿಸುವ ಬೀಗದ ಕೈ ತಮ್ಮ ಕೈಯಲ್ಲಿ ತೆಗೆದುಕೊಳ್ಳಲು ಬಯಸುತ್ತಾರೆ. ಆದರೆ ಗುಜರಾತ್‌ಲ್ಲಿ ಆಗಿರುವುದೇನು? ಜನರು ಅವರಿಗೆ ಬೀಗದಕೈಯನ್ನು(ಅಧಿಕಾರ) ಕೊಟ್ಟರು. ಆದರೆ ಅವರು ಅದಾನಿ(ಉದ್ದಿಮೆದಾರ)ಯನ್ನು ಮೇಲಕ್ಕೆ ತಂದರು" ಎಂದು ರಾಹುಲ್ ಗುಡುಗಿದ್ದಾರೆ. 
 
"ನಮ್ಮ ಪೂರ್ವಜರು ಪಾಕಿಸ್ತಾನದಿಂದ ಇಲ್ಲಿಗೆ ವಲಸೆ ಬಂದರು ಮತ್ತು ತಮಗೆ ನೀಡಲ್ಪಟ್ಟ ಭೂಮಿಯನ್ನು ಫಲವತ್ತಾಗಿಸಲು ಕಠಿಣ ಪರಿಶ್ರಮ ಮತ್ತು ಪ್ರಯತ್ನವನ್ನು ಪಟ್ಟಿದ್ದಾರೆ ಎಂದು ಗುಜರಾತಿನ ಸಿಖ್ ಕೃಷಿಕರು ನನ್ನಲ್ಲಿ ಹೇಳಿಕೊಂಡಿದ್ದಾರೆ".
 
"ಈಗ ಗುಜರಾತ್ ಸರಕಾರದ ಅಧಿಕಾರಿಗಳು ಅವರನ್ನು ನೀವು ಹೊರಗಿನವರು, ರಾಜ್ಯವನ್ನು ಬಿಟ್ಟು ಹೋಗಿ ಹೇಳುತ್ತಿದ್ದಾರೆ. ಅದೇ ರೀತಿ ತಮ್ಮ ಪಕ್ಷದ ಹಿರಿಯ ಹಿರಿಯ ನಾಯಕರನ್ನು ದೂರಕ್ಕೆ ಸರಿಸಿದ್ದಾರೆ" ಎಂದು ರಾಹುಲ್ ಹೇಳಿದರು.
 
"ಅಡ್ವಾಣಿ ಮತ್ತು ಜಸ್ವಂತ್ ಸಿಂಗ್‌ರವನ್ನು ನೀವು ಹೊರಗಿನವರು, ಇಲ್ಲಿಂದ ಹೊರಟು ಹೋಗಿ ಎಂದು ಹೇಳಲಾಗಿದೆ. ಒಂದು ವೇಳೆ ಅಟಲ್ ಬಿಹಾರಿ ವಾಜಪೇಯಿ ಈಗ  ರಾಜಕೀಯ ಬದುಕಿನಲ್ಲಿ ಸಕ್ರಿಯರಾಗಿದ್ದರೆ ಅವರಿಗೂ ಇದೇ ಪರಿಸ್ಥಿತಿ ಸೃಷ್ಟಿಯಾಗುತ್ತಿತ್ತು" ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.   

ವೆಬ್ದುನಿಯಾವನ್ನು ಓದಿ