ಉತ್ತರ ಪ್ರದೇಶ: ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಮೇಳದಲ್ಲಿ ಸುಮಾರು 7,000ಕ್ಕೂ ಹೆಚ್ಚು ಮಹಿಳೆಯರು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ.
ಜುನಾ ಅಖಾರಾದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ, ಶ್ರೀ ಪಂಚದಶನಮ್ ಆವಾಹನ ಅಖಾರಾದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅರುಣ್ ಗಿರಿ ಮತ್ತು ವೈಷ್ಣವ ಸಂತರ ಧರ್ಮಾಚಾರ್ಯರ ನೇತೃತ್ವದಲ್ಲಿ ಮಹಿಳೆಯರು ದೀಕ್ಷೆ ಸ್ವೀಕರಿಸಿದ್ದಾರೆ ಎಂದು ಉತ್ತರ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.
ಎಲ್ಲಾ ಪ್ರಮುಖ ಅಖಾರಾಗಳಲ್ಲಿ 7,000ಕ್ಕೂ ಹೆಚ್ಚು ಮಹಿಳೆಯರು 'ಗುರು ದೀಕ್ಷೆ' ಪಡೆದು ಸನಾತನ ಧರ್ಮಕ್ಕೆ ಸೇವೆ ಸಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದರು. ಈ ಪೈಕಿ ವಿದ್ಯಾವಂತ ಮಹಿಳೆಯರೇ ಹೆಚ್ಚು ಎನ್ನುವುದು ವಿಶೇಷ.
ಈ ಬಾರಿಯ ಮಹಾಕುಂಭದಲ್ಲಿ 246 ಮಹಿಳೆಯರು ನಾಗ ಸನ್ಯಾಸಿನಿಯಾಗಿ ದೀಕ್ಷೆ ಪಡೆದುಕೊಂಡಿದ್ದಾರೆ ಎಂದು ಶ್ರೀ ಪಂಚದಶನಂ ಜುನಾ ಅಖಾರಾದ ಅಧ್ಯಕ್ಷೆ ಡಾ.ದೇವಯಾ ಗಿರಿ ಹೇಳಿದ್ದಾರೆ.
2019ರ ಕುಂಭಮೇಳದಲ್ಲಿ 210 ಮಹಿಳೆಯರಿಗೆ ನಾಗ ಸನ್ಯಾಸಿನಿ ದೀಕ್ಷೆ ನೀಡಲಾಗಿತ್ತು ಎಂದು ದೇವಯಾ ತಿಳಿಸಿದ್ದಾರೆ. ಈ ಬಾರಿಯ ಮಹಾಕುಂಭಮೇಳಕ್ಕೆ ಬರುವ 10 ಮಂದಿಯ ಪೈಕಿ ನಾಲ್ವರು ಮಹಿಳೆಯಾಗಿದ್ದಾರೆ ಎಂದು ವರದಿಯಾಗಿದೆ.