ಮೋದಿಗೆ ಜನರ ಬಗ್ಗೆ ಕಾಳಜಿಯೇ ಇಲ್ಲ: ರಾಹುಲ್ ಗಾಂಧಿ

ಶುಕ್ರವಾರ, 23 ಸೆಪ್ಟಂಬರ್ 2016 (15:31 IST)
ಸದಾ ವಿದೇಶ ಪ್ರವಾಸದಲ್ಲಿಯೇ ವ್ಯಸ್ತರಾಗಿರುವ ಪ್ರಧಾನಿ ಮೋದಿ ಅವರಿಗೆ ಜನರ ಬಗ್ಗೆ ಕಾಳಜಿಯೇ ಇಲ್ಲ ಎಂದು ಕಾಂಗ್ರೆಸ್ ಉಪಾದ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. 
ಲಕ್ನೋದ ಸಮೀಪದಲ್ಲಿರುವ ಉನ್ನಾವೋದಲ್ಲಿ ರೋಡ್ ಶೋ ನಡೆಸಿ ಮಾತನ್ನಾಡುತ್ತಿದ್ದ ಅವರು, 2014ರ ಲೋಕಸಭಾ ಚುನಾವಣೆಯಲ್ಲಿ ಜನರಿಗೆ ಮಾಡಿದ್ದ ವಾಗ್ದಾನಗಳನ್ನು ಈಡೇರಿಸುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ. 2 ಕೋಟಿ ಜನರಿಗೆ ಉದ್ಯೋಗ ಮತ್ತು ಪ್ರತಿಯೊಬ್ಬರ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ಜಮಾ ಮಾಡುವುದಾಗಿ ಮಾಡಿದ್ದ ವಾಗ್ದಾನಗಳು ಕೇವಲ ಭರವಸೆಗಳಾಗಿಯೇ ಉಳಿದವು. ಎರಡು ವರ್ಷದಲ್ಲಿ ಏನೂ ಬದಲಾವಣೆಯಾಗಿಲ್ಲ ಎಂದು ಅವರು ಟೀಕಿಸಿದ್ದಾರೆ. 
 
ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ತಮಗೆ ಬೆಳ್ಳಿ ಕಿರೀಟವನ್ನು ತೊಡಿಸಲು ಬಂದಾಗ ಅದನ್ನು ನಿರಾಕರಿಸಿದ ಅವರು ಇಂತಹ ವಸ್ತುಗಳು 'ಅರಸ' ಪ್ರಧಾನಿ ಮೋದಿಗೆ ತಕ್ಕದ್ದು ಎಂದು ವ್ಯಂಗ್ಯವಾಡಿದರು.
 
ಪ್ರಧಾನಿ ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಾರೆ. ಆದರೆ ನಷ್ಟವಾದರೂ ರೈತರು ತಮ್ಮ ಸಾಲವನ್ನು ತಾವೇ ಕಟ್ಟಬೇಕಿದೆ ಎಂದು ಅವರು ಕಿಡಿಕಾರಿದ್ದಾರೆ. 
 
ರೈಲ್ವೆ ಮತ್ತು ಸಾಮಾನ್ಯ ಬಜೆಟ್‌ನ್ನು ವಿಲೀನಗೊಳಿಸುವ ಸರ್ಕಾರದ ನಿರ್ಧಾರವನ್ನು ಟೀಕಿಸಿದ ಅವರು ಮೋದಿ ಅವರ ಉದ್ಯಮಿ ಸ್ನೇಹಿತರಿಗೆ ಲಾಭ ತರುವ ಉದ್ದೇಶದಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ