ಬೆಂಗಳೂರು: ತನ್ನ ಗ್ರಾಮದಲ್ಲಿ ರಸ್ತೆ ನಿರ್ಮಿಸಿ ಕೊಡಿ ಎಂದು ಕೊಪ್ಪ ತಾಲೂಕಿನ ಸಿಂಧೂರ ಎನ್ನುವ ಬಾಲಕಿ ನೇರವಾಗಿ ಪ್ರಧಾನಿ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಘಟಕ ಕಾಂಗ್ರೆಸ್ ಸರ್ಕಾರಕ್ಕೆ ಇಷ್ಟೂ ಮಾಡಕ್ಕೆ ಆಗಲ್ವಾ ಎಂದು ಲೇವಡಿ ಮಾಡಿದೆ.
ಕೊಪ್ಪ ತಾಲೂಕಿನ ಗ್ರಾಮವೊಂದರ ಬಾಲಕಿ ತಮ್ಮೂರಿನಲ್ಲಿ ಶಾಲೆಗೆ ಹೋಗಬೇಕೆಂದರೆ 2-4 ಕಿ.ಮೀ. ನಡೆದೇ ಹೋಗಬೇಕು. ಆದರೆ ಇಲ್ಲಿ ಸರಿಯಾದ ರಸ್ತೆಯೂ ಇಲ್ಲ. ಹೀಗಾಗಿ ರಸ್ತೆ ನಿಮಿಸಿ ಕೊಡಿ ಎಂದು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ನೇರವಾಗಿ ಪ್ರಧಾನಿ ಮೋದಿಗೆ ಪತ್ರ ಬರೆದು ಮನವಿ ಮಾಡಿರುವ ವಿಚಾರ ಈಗ ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಘಟಕ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದೆಲ್ಲೆಡೆ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಾಗಿದೆ.
ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಬರಿದಾಗಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ಮೇಲೆ ರಾಜ್ಯದ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ಕೊಪ್ಪ ತಾಲ್ಲೂಕಿನ ಮಲಗಾರು ಗ್ರಾಮದ ಪುಟ್ಟ ಬಾಲಕಿ ರಸ್ತೆ ನಿರ್ಮಿಸಲು ಮೋದಿ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಮನವಿ ನೀಡಿದ್ದಾಳೆ.
ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರಕ್ಕೆ ರಸ್ತೆ ನಿರ್ಮಿಸುವ ಯೋಗ್ಯತೆಯೂ ಇಲ್ಲವೇ? ಇನ್ನೆಷ್ಟು ದಿನ ಈ ಭಂಡತನ ಇನ್ನಾದರೂ ಕುರ್ಚಿ ಬಿಟ್ಟು ತೊಲಗಿ ಎಂದು ವಾಗ್ದಾಳಿ ನಡೆಸಿದೆ.