ನಿಮ್ಮ ಕರ್ಮಕಾಂಡ ಬಯಲಿಗೆಳೆಯಲು ಉಪವಾಸ ಸತ್ಯಾಗ್ರಹ ಮಾಡುತ್ತೇವೆ: ಕಾಂಗ್ರೆಸ್ ವಿರುದ್ಧ ಗುಡುಗಿದ ಮೋದಿ

ಗುರುವಾರ, 12 ಏಪ್ರಿಲ್ 2018 (09:23 IST)
ನವದೆಹಲಿ: ಪ್ರಧಾನಿ ಮೋದಿ  ಕಾಂಗ್ರೆಸ್ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಉಪವಾಸ ಸತ್ಯಾಗ್ರಹ ವಿಚಾರದಲ್ಲಿ ಟಾಂಗ್ ಕೊಟ್ಟ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.

ಇಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಕ್ಷದ ಸಂಸದರು ಒಂದು ದಿನ ಸಂಸತ್ತಿನ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಘೋಷಿಸಿದ್ದರು. ಸಂಸತ್ ಅಧಿವೇಶನ ಸರಿಯಾಗಿ ನಡೆಯಲು ಬಿಡಲಿಲ್ಲ ಎಂಬ ಕಾರಣಕ್ಕೆ ಉಪವಾಸ ಸತ್ಯಾಗ್ರಹ ನಡೆಸಲು ಬಿಜೆಪಿ ತೀರ್ಮಾನಿಸಿದೆ.

ಬಿಜೆಪಿಯ ಈ ತೀರ್ಮಾನವನ್ನು ಟೀಕಿಸಿರುವ ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೇವಾಲ ಇದೊಂದು ನಾಟಕ ಎಂದಿದ್ದಾರೆ.  ‘ಸಿಬಿಎಸ್ ಇ ಮತ್ತು ಎಸ್ಎಸ್ ಸಿ ಹಗರಣದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದ್ದಕ್ಕೆ ಕೇಂದ್ರ ಸರ್ಕಾರ ಪ್ರಾಯಶ್ಚಿತ ರೂಪದಲ್ಲಿ ಸತ್ಯಾಗ್ರಹ ಮಾಡಲಿ’ ಎಂದು ಟೀಕಿಸಿದ್ದರು.

ಕಾಂಗ್ರೆಸ್ ಪ್ರತಿಕ್ರಿಯೆಗೆ ತಕ್ಕ ತಿರುಗೇಟು ಕೊಟ್ಟಿರುವ ಪ್ರಧಾನಿ ಮೋದಿ ‘ಮೊದಲು ನಿಮ್ಮ ಅಕ್ರಮಗಳನ್ನು ಬಯಲಿಗೆಳೆಯಲು ಉಪವಾಸ ಸತ್ಯಾಗ್ರಹ ಮಾಡುತ್ತೇವೆ. 2014 ರಲ್ಲಿ ಸೋತ ಒಂದು ರಾಜಕೀಯ ಪಕ್ಷ ದೇಶವನ್ನು ಮುಂದುವರಿಯಲು ಬಿಡುತ್ತಿಲ್ಲ. ಒಂದು ದಿನವೂ ಸಂಸತ್ ಕಲಾಪ ನಡೆಯಲು ಬಿಡದೇ ಇವರು ದೇಶದ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದರು. ಇಂತಹವರ ವಿರುದ್ಧ ನಾನು ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಮತ್ತು ನನ್ನ ಕರ್ತವ್ಯವನ್ನೂ ನಿಭಾಯಿಸುತ್ತೇನೆ’ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ