ಜೂನ್ 30 ರಂದು ಸಚಿವ ಸಂಪುಟದ ಜತೆ ನಾಲ್ಕು ಗಂಟೆಗಳ ಕಾಲ ನಡೆಸಿದ ದೀರ್ಘ ಅವಧಿಯ ಸಭೆಯಲ್ಲಿ ಪ್ರಧಾನಿ ಬಜೆಟ್ ಅನುದಾನಗಳನ್ನು ಬುದ್ಧಿವಂತಿಕೆಯಿಂದ ಬಳಸಲಾಗಿದೆಯೇ? ಕಳೆದ ಎರಡು ವರ್ಷಗಳಲ್ಲಿ ಯೋಜನೆಯ ಅನುಷ್ಠಾನ, ಯೋಜನೆಗಳ ಲಾಭ ಜನರಿಗೆ ತಲುಪಿಸಲಾಗಿದೆಯೆ?, ಪ್ರತಿ ಸಚಿವಾಲಯ ಅನುಷ್ಠಾನಗೊಳಿಸಿರುವ ಯೋಜನೆಗಳ ಸಂಖ್ಯೆ-ಇವೇ ಮೊದಲಾದ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸಚಿವರ ಕಾರ್ಯಕ್ಷಮತೆಯನ್ನು ಪರೀಕ್ಷಿಸಿದ್ದರು. ಅದರ ಆಧಾರದ ಮೇಲೆ ಕಳಪೆ ಪ್ರದರ್ಶನ ತೋರಿರುವ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಅವರ ಸ್ಥಾನಕ್ಕೆ ಹೊಸಬರನ್ನು ತುಂಬಿಕೊಳ್ಳಲು ಮೋದಿ ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್ ರಾಜ್ಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವುದು ಖಚಿತವೆನ್ನಲಾಗುತ್ತಿದೆ. ಆದರೆ ಮುಖ್ಯ ಖಾತೆಗಳಾದ ವಿತ್ತ, ಗೃಹ, ವಿದೇಶಾಂಗ ವ್ಯವಹಾರಗಳಲ್ಲಿ ಬದಲಾವಣೆಯಾಗುವುದಿಲ್ಲ ಎಂದು ಹೇಳಲಾಗುತ್ತಿದೆ.
ಕರ್ನಾಟಕದಿಂದ ಯಾರು ಹೊರ ಹೋಗುತ್ತಾರೆ, ಯಾರು ಒಳಬರುತ್ತಾರೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಕಾನೂನು ಸಚಿವ ಡಿ.ವಿ. ಸದಾನಂದ ಗೌಡರಿಗೆ ಕೋಕ್ ನೀಡುತ್ತಾರೆಂದು ಹೇಳಲಾಗುತ್ತಿದ್ದು ಹಿರಿಯ ನಾಯಕ, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಅವರು ಹಠಾತ್ ಆಗಿ ದೆಹಲಿಗೆ ಪಯಣಿಸಿರುವುದು ಈ ಅನುಮಾನಗಳಿಗೆ ಪುಷ್ಠಿ ನೀಡಿದೆ.
ಸಂಭಾವ್ಯ ಹೊಸ ಸಚಿವರ ಪಟ್ಟಿ: ಶಿವಸೇನೆಯ ಅನಿಲ್ ದೇಸಾಯಿ, ಆರ್ಪಿಐನ ರಾಮ್ ದಾಸ್ ಅಠಾವಳೆ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ವಿನಯ್ ಸಹಸ್ರಬುದ್ಧೆ, ಸಹರಣಾಪುರದ ಸಂಸದ ರಾಘವ್ ಲಖನ್ಪಾಲ್, ಉತ್ತರ ಪ್ರದೇಶದ ಅಪ್ನಾ ದಳ ನಾಯಕಿ ಅನುಪ್ರಿಯಾ ಪಟೇಲ್, ಮಹೇಂದ್ರ ನಾಥ್ ಪಾಂಡೆ, ಬಿಜೆಪಿಯ ಬಿಕಾನೇರ್ ಸಂಸದ ಅರ್ಜುನ್ ರಾಮ್ ಮೇಘವಾಲ್, ಗುಜರಾತ್ ಬಿಜೆಪಿ ನಾಯಕ ಪುರುಷೋತ್ತಮ ರುಪಾಲಾ, ಡಾರ್ಜಿಲಿಂಗ್ ಬಿಜೆಪಿ ಸಂಸದ ಎಸ್ಎಸ್ ಅಹ್ಲುವಾಲಿಯಾ, ಅಲ್ಮೋರಾದ ಸಂಸದ(ಬಿಜೆಪಿ) ಅಜಯ್ ತಮ್ತಾ, ಕರ್ನಾಟಕದ ಬಿಜಾಪುರದ ಸಂಸದ ರಮೇಶ್ ಜಿಗಜಿಗಣಗಿ.