ನೋಟು ನಿಷೇಧದ ವಿರುದ್ಧ ಜನವೇದನಾ ರ‍್ಯಾಲಿ

ಬುಧವಾರ, 11 ಜನವರಿ 2017 (12:23 IST)
ಹೊಸ ವರ್ಷದ ಟೂರ್ ಮುಗಿಸಿ ಬಂದಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನೇತೃತ್ವದಲ್ಲಿ ನವದೆಹಲಿಯಲ್ಲಿಂದು ನಡೆಯುತ್ತಿರುವ ಜನವೇದನಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ನೋಟ್ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಮಾಡಿದ ನೆಪ ಎಂದಿದ್ದಾರೆ.
ತಾಲ್ ಕಟೋರ್ ಸ್ಟೇಡಿಯಂನಲ್ಲಿ ಮಾತನಾಡುತ್ತಿದ್ದ ರಾಹುಲ್, ನೋಟ್ ಬ್ಯಾನ್ ಒಂದು ದೊಡ್ಡ ನೆಪವಾಗಿದೆ. ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಮಾಡಿದ ನೆಪವಿದು. ಇದರ ಬಳಿಕ ಆಗುವ ಪರಿಣಾಮಗಳ ಬಗ್ಗೆ ಕೂಡ ಯೋಚಿಸಿಲ್ಲ. 
ಯಾವ ಅರ್ಥಶಾಸ್ತ್ರಜ್ಞರು ಈ ನಡೆಯನ್ನು ಸ್ವಾಗತಿಸಿಲ್ಲ ಎಂದಿದ್ದಾರೆ.
 
ಮೋದಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶವನ್ನು ಶಕ್ತಿಹೀನಗೊಳಿಸಿದ್ದಾರೆ. ಸಂವಿಧಾನಬದ್ಧ ಸಂಸ್ಥೆಗಳು ಮೋದಿ ಆಡಳಿತದ ಎರಡು ವರ್ಷಗಳಲ್ಲಿ ಬಲಹೀನಗೊಂಡಿವೆ, ಎಂದು ರಾಹುಲ್ ಕಿಡಿಕಾರಿದ್ದಾರೆ.
 
ಮೋದಿ ಕಾರ್ಯಕ್ರಮಗಳ ಬಗ್ಗೆ ವ್ಯಂಗ್ಯವಾಡಿದ ಅವರು, ಯೋಗದ ಹೆಸರಲ್ಲಿ ಪದ್ಮಾಸನದಲ್ಲಿ ಕುಳ್ಳಿರಿಸಿದರು. ಪೊರಕೆ ಹಿಡಿಯಲು ಅರಿಯದ ಮೋದಿ ಸ್ವಚ್ಛತೆ ಹೆಸರಲ್ಲಿ ಜನರಿಂದ ಪೊರಕೆ ಹಿಡಿಸಿದರು. ಸ್ವಚ್ಛತೆ ಯೋಗ, ಮೇಕ್ ಇನ್ ಇಂಡಿಯಾ ಹೆಸರಲ್ಲಿ ಪ್ರಚಾರ ಪಡೆದಿದ್ದಷ್ಟೇ ಮೋದಿ ಸಾಧನೆ, ಎಂದಿದ್ದಾರೆ.
 
ಮೊದಲ ಬಾರಿ ಭಾರತದ ಪ್ರಧಾನಿ ಜಗತ್ತಿನ ಮುಂದೆ ಅಪಹಾಸ್ಯಕ್ಕೀಡಾಗುತ್ತಿದ್ದಾರೆ. ಮೋದಿ ಅವರಿಗೆ ಪೊರಕೆ ಹಿಡಿಯಲು ಕೂಡ ಬರುವುದಿಲ್ಲ. ಜನರು ಅಚ್ಛೇ ದಿನ್ ಎಲ್ಲಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಅದಕ್ಕಾಗಿ ಕಾಯುತ್ತಿದ್ದಾರೆ. ಆದರೆ ಇಂದು ಜನ ಎಂದಿಗಿಂತ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಚ್ಛೇ ದಿನ್ ಬರುವುದು 2019ರಲ್ಲಿ ಕಾಂಗ್ರೆಸ್ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಾಗಲಷ್ಟೇ ಎಂದು ರಾಹುಲ್ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ