ಕಾವೇರಿ ನದಿ ವಿವಾದ ಪರಿಹಾರ ಇನ್ನು ಸುಲಭ

ಬುಧವಾರ, 15 ಮಾರ್ಚ್ 2017 (09:15 IST)
ನವದೆಹಲಿ: ದೇಶದ ನದಿ ವ್ಯಾಜ್ಯಗಳನ್ನು ಸುಲಭವಾಗಿ ಪರಿಹರಿಸಲು ಕೇಂದ್ರ ಸರ್ಕಾರ ಹೊಸ ನ್ಯಾಯಾಧಿಕರಣ ವ್ಯವಸ್ಥೆಯೊಂದನ್ನು ನಿರ್ಮಿಸಲು ಹೊಸ ಮಸೂದೆ ಮಂಡಿಸಿದೆ. ಇದರಿಂದ ಕಾವೇರಿ, ಕೃಷ್ಣ ಮಹದಾಯಿ ಸೇರಿದಂತೆ ಹಲವು ನದಿ ವಿವಾದಗಳಿಗೆ ಬೇಗನೇ ಪರಿಹಾರ ಸಿಗಲಿದೆ.

 
ಅಂತರಾಜ್ಯ ನೀರು ಹಂಚಿಕೆ ವಿವಾದ ಬಗೆಹರಿಸಲು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಸಂಸತ್ತಿನಲ್ಲಿ ಹೊಸ ಮಸೂದೆಯೊಂದನ್ನು ಮಂಡಿಸಿದ್ದಾರೆ. ಅದರಂತೆ ಇನ್ನು ಇಡೀ ದೇಶಕ್ಕೆ ಒಂದೇ ನ್ಯಾಯಾಧಿಕರಣ ಅಸ್ಥಿತ್ವಕ್ಕೆ ಬರಲಿದೆ.

ಎಲ್ಲಾ ನದಿ ವಿವಾದಗಳೂ ಒಂದೇ ನ್ಯಾಯಾಧಿಕರಣದಲ್ಲಿ ತೀರ್ಮಾನಗೊಳ್ಳಲಿದೆ. ಅಲ್ಲದೆ, ನ್ಯಾಯಾಧಿಕರಣ ಯಾವುದೇ ನದಿ ವಿವಾದವನ್ನು ನಾಲ್ಕುವರೆ ವರ್ಷಕ್ಕಿಂತ ಹೆಚ್ಚು ಸಮಯ ಇತ್ಯರ್ಥಗೊಳಿಸದೇ ಇರುವಂತಿಲ್ಲ.

ನ್ಯಾಯಾಧಿಕರಣ ನೀಡುವ ತೀರ್ಪನ್ನು ಎರಡೂ ರಾಜ್ಯಗಳು ಪಾಲಿಸಬೇಕು. ಈ ನ್ಯಾಯಾಧಿಕರಣದಲ್ಲಿ ತಜ್ಞ ಇಂಜಿನಿಯರ್ ಗಳಿರುತ್ತಾರೆ. ನ್ಯಾಯಾಧಿಕರಣದ ಮುಖ್ಯಸ್ಥರ ಅಧಿಕಾರಾವಧಿ ಐದು ವರ್ಷವಾಗಿರುತ್ತದೆ. 70 ವರ್ಷಕ್ಕಿಂತ ಮೇಲ್ಪಟ್ಟವರು ನ್ಯಾಯಾಧಿಕರಣದಲ್ಲಿರುವಂತಿಲ್ಲ ಎಂದು ಮಸೂದೆಯಲ್ಲಿ ಹೇಳಲಾಗಿದೆ.  ಆದರೆ ವಿಪಕ್ಷಗಳು ರಾಜ್ಯಗಳ ಅಭಿಪ್ರಾಯ ಕೇಳದೇ ಇಂತಹದ್ದೊಂದು ನ್ಯಾಯಾಧಿಕರಣ ಸ್ಥಾಪಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ