ಅನೇಕ ಕ್ಷೇತ್ರಗಳಲ್ಲಿ ಮತಗಳ್ಳತನ: ಪ್ರಧಾನಿ, ಚುನಾವಣಾ ಆಯೋಗದ ವಿರುದ್ಧ ಬೆಂಗಳೂರಿನಲ್ಲಿ ಗುಡುಗಿದ ರಾಹುಲ್‌

Sampriya

ಶುಕ್ರವಾರ, 8 ಆಗಸ್ಟ್ 2025 (14:04 IST)
ಬೆಂಗಳೂರು: ‌ನರೇಂದ್ರ ಮೋದಿ ಅವರು ಪ್ರಧಾನಿ 25 ಸೀಟುಗಳಿಂದ ಪ್ರಧಾನ ಮಂತ್ರಿಯಾಗಿದ್ದಾರೆ. ಸದ್ಯ ಒಂದು ಸೀಟಿನಲ್ಲಿ ಕಳ್ಳತನವಾಗಿದೆ ಎನ್ನುವುದನ್ನು ಸಾಬೀತು ಮಾಡಿದ್ದೇವೆ. ಎಲೆಕ್ಟ್ರಾನಿಕ್‌ ಮತಯಂತ್ರದ ಅಂಕಿ ಅಂಶ ಸಿಕ್ಕರೆ ಮೋದಿ ಅವರು ಮೋಸದಿಂದ ಪ್ರಧಾನಿಯಾದ ಬಗ್ಗೆ ಸಾಕ್ಷಿ ಸಮೇತ ತೋರಿಸುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸವಾಲು ಹಾಕಿದರು. 

ಕರ್ನಾಟಕದಲ್ಲಿ ಮತಗಳ್ಳತನ ನಡೆದಿದೆ  ಎಂದು ಆರೋಪ ಮಾಡಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ ಎನ್ನುವ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.  ಸಂವಿಧಾನ ಪುಸ್ತಕ ತೋರಿಸುತ್ತಾ ಭಾಷಣ ಆರಂಭಿಸಿದ ರಾಹುಲ್, ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬಿಜೆಪಿ ನಾಯಕರು ಸಂವಿಧಾನವನ್ನು ಮುಗಿಸುವ ಹುನ್ನಾರ ಮಾಡಿದ್ದಾರೆ. ಸಮೀಕ್ಷೆಯ ಪ್ರಕಾರ ಕಳೆದ ಲೋಕಸಭಾ ಕ್ಷೇತ್ರದಲ್ಲಿ 16 ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎನ್ನಲಾಗಿತ್ತು, ಆದರೆ ನಾವು ಗೆದ್ದಿದ್ದು 9 ಕ್ಷೇತ್ರಗಳಲ್ಲಿ ಮಾತ್ರ. ಮತಕಳ್ಳತನವೇ ಇದಕ್ಕೆ ಕಾರಣ ಎಂದು ಆರೋಪಿಸಿದರು.

ಬೆಂಗಳೂರು ಕೇಂದ್ರದ ಮಹಾದೇವಪುರ ಕ್ಷೇತ್ರದ ಫಲಿತಾಂಶವನ್ನು ಸಮೀಕ್ಷೆ ಮಾಡಿದಾಗ ಚುನಾವಣಾ ಆಯೋಗ ಮತ್ತು ಬಿಜೆಪಿ ಒಟ್ಟಾಗಿ ಚುನಾವಣೆಯಲ್ಲಿ ಮೋಸ ಮಾಡಿದೆ. ಆರು ಮತಗಳಲ್ಲಿ ಒಂದು ಮತ ಕಳ್ಳತನ ಮಾಡಿದ್ದಾರೆ. ಭಾವಚಿತ್ರವಿಲ್ಲದ 4 ಸಾವಿರ ಪ್ರಕರಣಗಳು ದೊರೆತಿವೆ. ಒಬ್ಬನೇ ಮತದಾರನಿಂದ ಹಲವು ರಾಜ್ಯಗಳಲ್ಲಿ ಮತದಾನವಾಗಿದೆ ಎಂದು ಟೀಕಿಸಿದರು.

ಈ ಮತ ಕಳವು ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಾದ್ಯಂತ ನಡೆದಿದೆ. ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ. ಒಂದು ಕ್ಷೇತ್ರದಲ್ಲಿ ನಡೆದ ಕಳ್ಳತನದ ಬಗ್ಗೆ ಪರಿಶೀಲನೆ ಮಾಡಿದ್ದೇವೆ, ರಾಜ್ಯದಲ್ಲಿ ಅನೇಕ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ ಎನ್ನುವುದನ್ನು ಸಾಬೀತು ಮಾಡಬಲ್ಲೆವು ಎಂದು ಹೇಳಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ