ಸಾವಿನ ಬಳಿಕವೂ ನಿಲ್ಲದ "ಶಕ್ತಿಮಾನ್" ರಾಜಕೀಯ

ಬುಧವಾರ, 13 ಜುಲೈ 2016 (07:17 IST)
ಬಿಜೆಪಿ ಪ್ರತಿಭಟನೆ ವೇಳೆ ಕಾಲು ಮುರಿದುಕೊಂಡು ಸಾವನ್ನಪ್ಪಿದ್ದ ಪೊಲೀಸ್ ಕುದುರೆ ‘ಶಕ್ತಿಮಾನ್‌’ ಸ್ಮರಣಾರ್ಥ ಇಲ್ಲಿನ ರಿಪಾಸ್ನಾ ಸೇತುವೆ ಬಳಿ ಸ್ಥಾಪಿಸಿದ್ದ ಪ್ರತಿಮೆಯನ್ನು ಎರಡು ದಿನಗಳಲ್ಲೇ ತೆರವುಗೊಳಿಸಲಾಗಿದೆ. 

 
ಪ್ರತಿಮೆ ಸ್ಥಾಪನೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಸ್ಸೂ- ಡೆಹ್ರಾ ಡೂನ್‌ ಅಭಿವೃದ್ಧಿ ಪ್ರಾಧಿಕಾರ ಪ್ರತಿಮೆಯನ್ನು ಮಂಗಳವಾರ ತೆರವುಗೊಳಿಸಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಪ್ರಾಧಿಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
 
ಉತ್ತರಾಖಂಡದ ಆಡಳಿತಾರೂಢ ಸರ್ಕಾರ ನೂತನ ಉದ್ಯಾನವನವನ್ನು ನಿರ್ಮಿಸಿ ಅದಕ್ಕೆ ಹುತಾತ್ಮ ಪೊಲೀಸ್ ಕುದುರೆ ನೆನಪಲ್ಲಿ 'ಶಕ್ತಿಮಾನ್ ಪಾರ್ಕ್' ಎಂದು ನಾಮಕರಣ ಮಾಡಿತ್ತು. ಕಳೆದ ಶನಿವಾರ ಶಕ್ತಿಮಾನ್ ಪ್ರತಿಮೆಯನ್ನು ಉದ್ಯಾನವನದ ಮುಂದೆ ಸ್ಥಾಪಿಸಲಾಗಿತ್ತು. 
 
ಇದಕ್ಕೆ ಕೆಂಡಾಮಂಡಲವಾದ ಬಿಜೆಪಿ ಇದು ರಾವತ್ ಸರ್ಕಾರದ ಚುನಾವಣಾ ಗಿಮಿಕ್. ರಾಜ್ಯದ ಹುತಾತ್ಮ ಸೈನಿಕರಿಗೆ ಗೌರವ ಅರ್ಪಿಸದ ಸರ್ಕಾರ ಕುದುರೆ ಮೇಲೆ ಏಕೆ ಇಷ್ಟೊಂದು ಗೌರವ ತೋರಿಸುತ್ತಿದೆ ಎಂದು ಪ್ರಶ್ನಿಸಿತ್ತು.
 
ದೇಶಾದ್ಯಂತ ಅಷ್ಟೇ ಅಲ್ಲದೇ ವಿಶ್ವದಾದ್ಯಂತ ಸುದ್ದಿಯಾದ, ರಾಜಕೀಯ ಆಟಕ್ಕೆ ಬಲಿಯಾದ ಮುಗ್ಧ ಪ್ರಾಣಿ ಸಾವಿನ ನಂತರವೂ ರಾಜಕೀಯದ ಕೆಸರಾಟಕ್ಕೆ ಬಲಿಯಾಗುತ್ತಿದೆ.  
 
ಕಾರ್ಯದಕ್ಷತೆಗೆ ಹೆಸರಾಗಿದ್ದ 14 ವರ್ಷದ ಶಕ್ತಿಮಾನ್ ಪೊಲೀಸ್ ಕುದುರೆ ಮಾರ್ಚ್ 14ರಂದು ಉತ್ತರಾಖಂಡದಲ್ಲಿ ನಡೆದ ಬಿಜೆಪಿ ಪ್ರತಿಭಟನೆ ವೇಳೆ ಕಾಲಿಗೆ ಏಟು ಬಿದ್ದು ಅಸ್ವಸ್ಥವಾಗಿತ್ತು. ಬಿಜೆಪಿ ಶಾಸಕ ಗಣೇಶ್ ಜೋಶಿ ಶಕ್ತಿಮಾನ್ ಮೇಲೆ ದಾಳಿ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಅವರ ಬಂಧನದಿಂದ ಕೆರಳಿದ್ದ ಬಿಜೆಪಿ ಕಾಂಗ್ರೆಸ್ ಸರ್ಕಾರವೇ ಉರುಳಲು ಕಾರಣವಾಗಿತ್ತು. ಆದರೆ ಬಳಿಕ ರಾವತ್ ಬಹುಮತ ಸಾಬೀತು ಪಡಿಸಲು ಯಶಸ್ವಿಯಾದರು. 
 
ಗಂಭೀರವಾಗಿ  ಗಾಯಗೊಂಡಿದ್ದ ಶಕ್ತಿಮಾನ್ ಕಾಲನ್ನು ಕತ್ತರಿಸಿ, ಕೃತಕ ಕಾಲನ್ನು ಜೋಡಿಸಲಾಗಿತ್ತು. ಆದರೆ ಸಹಿಸಲಾಗದ ನೋವಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶಕ್ತಿಮಾನ್ ಎಪ್ರಿಲ್ 20ರಂದು ಕೊನೆಯುಸಿರೆಳೆದಿದ್ದ. ಆತನನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಮಣ್ಣು ಮಾಡಲಾಗಿತ್ತು.
 
ಶಕ್ತಿಮಾನ್ ಇನ್ನೊಂದು ಪ್ರತಿಮೆಯನ್ನು ಪೊಲೀಸ್ ಮುಖ್ಯ ಕಾರ್ಯಾಲಯದಲ್ಲಿ ಸ್ಥಾಪಿಸಲಾಗಿದ್ದು. ಇದರ ಭವಿಷ್ಯ ಸಹ ಈಗ ಅನಿರ್ದಿಷ್ಟ. ಈ ಪ್ರತಿಮೆ ಇಲ್ಲಿರಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸುವುದು ಮುಂಬರುವ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಸಿಎಂ ಹರೀಶ್ ರಾವತ್ ಹೇಳಿದ್ದಾರೆ.  ಶಕ್ತಿಮಾನ್ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಆತನ ಆರೋಗ್ಯ ವಿಚಾರಿಸಲು ರಾವತ್ ಭೇಟಿ ನೀಡಿದ್ದರು.
 
ಉತ್ತರಾಖಂಡದಲ್ಲಿ ಮತ್ತೆ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ