ನವದೆಹಲಿ: ಹೆಣ್ಣು ಮಗುವಿನ ಪೋಷಕರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ಎಲ್ಲವೂ ರಾಜ್ಯಸಭೆಯಲ್ಲಿ ಸುಧಾಮೂರ್ತಿ ಮಾಡಿದ ಭಾಷಣದ ಇಫೆಕ್ಟ್ ಎನ್ನಬಹುದು.
ತಾವು ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ಬಳಿಕ ಸುಧಾಮೂರ್ತಿ ಮೊದಲ ಭಾಷಣದಲ್ಲೇ ಇತ್ತೀಚೆಗಿನ ದಿನಗಳಲ್ಲಿ ವ್ಯಾಪಕವಾಗಿರುವ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಭಾಷಣ ಮಾಡಿದ್ದರು. ಅಲ್ಲದೆ, ಗರ್ಭಕಂಠದ ಕ್ಯಾನ್ಸರ್ ಗೆ ನೀಡಲಾಗುವ ಲಸಿಕೆ ಕಡಿಮೆ ದರದಲ್ಲಿ ಜನರಿಗೆ ಸಿಗುವಂತಾಗಬೇಕು ಎಂದು ಪ್ರತಿಪಾದಿಸಿದ್ದರು.
ಅವರ ಭಾಷಣಕ್ಕೆ ಈಗ ಕೊನೆಗೂ ಫಲ ಸಿಕ್ಕಿದೆ. ಇನ್ನು ಆರು ತಿಂಗಳಿನಲ್ಲೇ ಬಾಲಕಿಯರಿಗೆ ಕ್ಯಾನ್ಸರ್ ಲಸಿಕೆಯನ್ನು ಸರ್ಕಾರದ ವತಿಯಿಂದಲೇ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಗರ್ಭಕಂಠದ ಕ್ಯಾನ್ಸರ್ ಗೆ ನೀಡಲಾಗುವ ಲಸಿಕೆ ದುಬಾರಿಯದ್ದಾಗಿತ್ತು. ಇದೀಗ ಸರ್ಕಾರವೇ ಲಸಿಕೆ ನೀಡಲು ಮುಂದಾಗಿರುವುದು ಶುಭ ಸುದ್ದಿಯೇ.
9 ರಿಂದ 16 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ನಿಯಂತ್ರಿಸುವ ಲಸಿಕೆ ಇದಾಗಿರಲಿದೆ. ಲಸಿಕೆ ಈಗ ಪ್ರಾಯೋಗಿಕ ಹಂತದಲ್ಲಿದೆ. ಇನ್ನು ಐದಾರು ತಿಂಗಳಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸಹಾಯಕ ಸಚಿವ ಪ್ರತಾಪ್ ಜಾಧವ್ ಮಾಹಿತಿ ನೀಡಿದ್ದಾರೆ.