ಜಿಎಸ್ ಟಿ ಕಾರ್ಯಕ್ರಮಕ್ಕೆ ಹೋಗಬೇಕೋ ಬೇಡವೋ? ಮನಮೋಹನ್ ಸಿಂಗ್ ರನ್ನು ಭೇಟಿ ಮಾಡಲಿರುವ ಸೋನಿಯಾ

ಗುರುವಾರ, 29 ಜೂನ್ 2017 (11:09 IST)
ನವದೆಹಲಿ: ಜೂನ್ 30 ರ ಮಧ್ಯರಾತ್ರಿಯಿಂದ ದೇಶದಾದ್ಯಂತ ಜಿಎಸ್ ಟಿ ತೆರಿಗೆ ಪದ್ಧತಿ ಜಾರಿಗೆ ತರಲು ಉದ್ದೇಶಿಸಿರುವ ಕೇಂದ್ರ ಸರ್ಕಾರ ಸರ್ವಪಕ್ಷಗಳೊಂದಿಗೆ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.

 
ಆದರೆ ಈ ಕಾರ್ಯಕ್ರಮಕ್ಕೆ ಹೋಗಬೇಕೋ ಬೇಡವೋ ಎಂಬ ಬಗ್ಗೆ ವಿಪಕ್ಷ ಕಾಂಗ್ರೆಸ್ ನಲ್ಲಿ ಗೊಂದಲವಿದೆ. ಈ ಹಿನ್ನಲೆಯಲ್ಲಿ ಜಿಎಸ್ ಟಿ ಪರ ನಿಲ್ಲಬೇಕೋ ಬೇಡವೋ ಎಂಬ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ಮಾಜಿ ಪ್ರಧಾನಿ ಹಾಗೂ ಅರ್ಥ ತಜ್ಞ ಮನಮೋಹನ್ ಸಿಂಗ್ ರನ್ನು ಭೇಟಿ ಮಾಡಲಿದ್ದಾರೆ.

ಈ ಇಬ್ಬರು ನಾಯಕರ ಭೇಟಿಯ ನಂತರ ಕೈಗೊಳ್ಳುವ ನಿರ್ಧಾರದಂತೆ ಕಾಂಗ್ರೆಸ್ ಜಿಎಸ್ ಟಿ ಪರವಿರಬೇಕೋ ವಿರೋಧವಿರಬೇಕೋ ಎಂದು ನಿರ್ಧರಿಸಲಿದೆ. ಕೆಲವು ಕಾಂಗ್ರೆಸ್ ನಾಯಕರು ಈಗಾಗಲೇ ವ್ಯಾಪಾರಿಗಳ ಹಿತದೃಷ್ಟಿಯಿಂದ ಜಿಎಸ್ ಟಿಯನ್ನು ಬೆಂಬಲಿಸಬಾರದು ಎಂಬ ನಿಲುವು ಹೊಂದಿದ್ದಾರೆ ಎನ್ನಲಾಗಿದೆ.

ಈಗಾಗಲೇ ಡಿಎಂಕೆ, ತೃಣಮೂಲ ಕಾಂಗ್ರೆಸ್ ಜಿಎಸ್ ಟಿ ಕಾಯಿದೆಯನ್ನು ತಿರಸ್ಕರಿಸುವ ನಿರ್ಧಾರ ಮಾಡಿದೆ. ಆದರೆ ಜಿಎಸ್ ಟಿ ಕಾಯಿದೆಯನ್ನು ಲಾಂಚ್ ಮಾಡುವ ಕಾರ್ಯಕ್ರಮಕ್ಕೆ ಮನಮೋಹನ್ ಸಿಂಗ್ ರನ್ನೂ ಅತಿಥಿಯಾಗಿ ಕೇಂದ್ರ ಸರ್ಕಾರ ಆಹ್ವಾನಿಸಿರುವುದರಿಂದ ಕಾಂಗ್ರೆಸ್ ಉಭಯ ಸಂಕಟದಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ