ತಾಳಗುಪ್ಪ-ಹೊನ್ನಾವರ ರೈಲು ಮಾರ್ಗ ಸರ್ವೇ ಪೂರ್ಣ, ಮುಂದಿನ ಬಜೆಟ್‌ನಲ್ಲಿ ಅನುಮೋದನೆ?

ಗುರುವಾರ, 27 ಅಕ್ಟೋಬರ್ 2016 (10:17 IST)
ಬೆಂಗಳೂರು: ಎಲ್ಲ ಅಂದುಕೊಂಡಂತೆ ಸಾಗಿದರೆ ಮುಂಬರುವ ಕೇಂದ್ರ ರೇಲ್ವೆ ಬಜೆಟ್ ನಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹೊನ್ನಾವರ-ತಾಳಗುಪ್ಪ, ಧಾರವಾಡ- ಬೈಲಹೊಂಗಲ ನೂತನ ರೈಲ್ವೆ ಮಾರ್ಗಕ್ಕೆ ಹಸಿರು ನಿಶಾನೆ ದೊರಕಲಿವೆ.

ಪ್ರಸಕ್ತ ಸಾಲಿನಲ್ಲಿ ಘೋಷಿಸಿರುವ ನೂತನ ರೈಲ್ವೆ ಮಾರ್ಗಗಳ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ರೇಲ್ವೆ ಮಂಡಳಿಗೆ ಸರ್ವೇ ವರದಿ ತಲುಪಲಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸುಮಾರು ಹನ್ನೆರಡು ಯೋಜನೆಗಳು ಮೂರ್ತ ರೂಪ ಪಡೆದುಕೊಳ್ಳಲಿದೆ. ಆ ಮೂಲಕ ರೈಲ್ವೆ ಪ್ರಯಾಣಿಕರ ಕನಸು ಸಾಕಾರ ಪಡೆದುಕೊಳ್ಳಲಿದೆ.
 
ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭು ಈ ಬಾರಿಯ ಬಜೆಟ್‌ನಲ್ಲಿ ಹೊಸ ಯೋಜನೆಗಳಿಗಿಂತ ಹಳೆಯ ಯೋಜನೆ ಪೂರ್ಣಗೊಳಿಸುವುದಕ್ಕೆ ಒತ್ತು ನೀಡಿದ್ದರು. ಅಲ್ಲದೇ ಅನೇಕ ಹಳೆಯ ಯೋಜನೆಗಳ ಸರ್ವೇ ಕಾರ್ಯವೇ ಮಾಡದಿರುವುದು ಗಮನಿಸಿ, ಅಂಥ ಯೋಜನೆಗಳ ಸರ್ವೇಗೆ ಅಗತ್ಯ ಹಣ ಮಂಜೂರು ಮಾಡುವ ಜತೆಗೆ ಅದು ಕಾರ್ಯಾರಂಭಗೊಳ್ಳಲು ಕ್ರಮ ಕೈಗೊಂಡಿದ್ದರು. ಅವುಗಳಲ್ಲಿ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ 12 ಯೋಜನೆಗಳು ಸೇರಿಕೊಂಡಿದ್ದವು. ಈಗ ಅವುಗಳ ಸರ್ವೇ ಕಾರ್ಯಗಳೆಲ್ಲ ಮುಗಿದಿದ್ದು, ಬಜೆಟ್‌ನಲ್ಲಿ ಅನುಮೋದನೆಯೊಂದೇ ದೊರಕಬೇಕಿದೆ.
 
ಅವುಗಳಲ್ಲಿ ಮುಖ್ಯವಾಗಿ ಧಾರವಾಡ- ಬೈಲಹೊಂಗಲ್- ಬೆಳಗಾವಿ ಮಾರ್ಗ ನಿರ್ಮಾಣಗೊಳ್ಳಬೇಕು ಎನ್ನುವುದು ಹಳೆಯ ಬೇಡಿಕೆಯಲ್ಲಿ ಒಂದಾಗಿತ್ತು. 91 ಕಿ.ಮೀ. ಉದ್ದದ ಈ ಮಾರ್ಗ ವಿಶೇಷವಾಗಿ ರೈತರಿಗೆ ಅನುಕೂಲವಾಗಲಿದ್ದು, ವಾಣಿಜ್ಯ ವಹಿವಾಟಿಗೆ ಉತ್ತಮವಾಗಿದೆ. ಬಹುನಿರೀಕ್ಷಿತ 82 ಕಿ.ಮೀ. ಉದ್ದದ ತಾಳಗುಪ್ಪಾ-ಹೊನ್ನಾವರ ಮಾರ್ಗ ನಿರ್ಮಾಣದ ಸರ್ವೇ, 53 ಕಿ.ಮೀ. ಉದ್ದದ ಗದಗ-ಹಾವೇರಿ ಹೊಸ ಮಾರ್ಗ ನಿರ್ಮಾಣದ ಸರ್ವೇ ಕಾರ್ಯವೂ ಮುಗಿದಿದೆ. ಇಂಜಿನಿಯರಿಂಗ್ ಹಾಗೂ ಸಂಚಾರಿ ವಿಭಾಗದವರು ಈ ಮಾರ್ಗ ನಿರ್ಮಾಣದಲ್ಲಿ ಯಾವುದೇ ತೊಂದರೆಯಾಗದು ಎನ್ನುವ ಮಹತ್ವದ ಸಂಗತಿಯನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ