ಕಾಂಗ್ರೆಸ್ ಬಿಕ್ಕಟ್ಟಿಗೆ ಮದ್ದು ಹಚ್ಚಲು ಬೆಂಗಳೂರಿಗೆ ಸುರ್ಜೇವಾಲ

Krishnaveni K

ಸೋಮವಾರ, 30 ಜೂನ್ 2025 (09:34 IST)
ಬೆಂಗಳೂರು: ಕಾಂಗ್ರೆಸ್ ನಲ್ಲಿ ಉಂಟಾಗಿರುವ ಗೊಂದಲಗಳಿಗೆ ಮದ್ದು ಹಚ್ಚಲು ಈಗ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಇಂದು ಬೆಂಗಳೂರಿಗೆ ಬರುತ್ತಿದ್ದಾರೆ.

ಇತ್ತೀಚೆಗೆ ಹಿರಿಯ ಶಾಸಕರಾದ ಬಿಆರ್ ಪಾಟೀಲ್ ಮತ್ತು ರಾಜು ಕಾಗೆ ಸರ್ಕಾರದ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು. ಇದರಿಂದ ಸರ್ಕಾರ ವಿಪಕ್ಷಗಳ ಟೀಕೆಗೆ ಆಹಾರವಾಗಿತ್ತು. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನುತ್ತಿರುವ ವಿಪಕ್ಷದ ಟೀಕೆ ಸಮರ್ಥಿಸುವ ರೀತಿಯಲ್ಲಿ ಈ ಇಬ್ಬರು ಶಾಸಕರು ಮಾತನಾಡಿದ್ದರು.

ಇದರ ಬೆನ್ನಲ್ಲೇ ಸಚಿವ ಕೆಎನ್ ರಾಜಣ್ಣ ಸೆಪ್ಟೆಂಬರ್ ಬಳಿಕ ರಾಜ್ಯದಲ್ಲಿ ಕ್ರಾಂತಿಯಾಗಲಿದೆ ಎಂದಿದ್ದರು. ಇದರಿಂದಾಗಿ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆಗೆ ಬಂದಿದೆ. ಸಿದ್ದರಾಮಯ್ಯ ಸರ್ಕಾರದ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು.

ಇದರ ಬೆನ್ನಲ್ಲೇ ಈಗ ಕಾಂಗ್ರೆಸ್ ಒಳಬೇಗುದಿ ಶಮನಗೊಳಿಸಲು ಸುರ್ಜೇವಾಲ ಬೆಂಗಳೂರಿಗೆ ಬರುತ್ತಿದ್ದಾರೆ. ಇಂದು ಕಾಂಗ್ರೆಸ್ ನ ಅಸಮಾಧಾನಿತ ನಾಯಕರ ಜೊತೆ ಒನ್ ಟು ಒನ್ ಮೀಟಿಂಗ್ ನಡೆಸಲಿದ್ದಾರೆ. ಅವರ ಅಸಮಾಧಾನಗಳನ್ನು ಕೇಳಲಿದ್ದಾರೆ. ಕಾಂಗ್ರೆಸ್ ನ 100 ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಸಭೆ ಬಳಿಕ ಅಸಮಾಧಾನಿತರಿಗೆ ಸುರ್ಜೇವಾಲ ಎಚ್ಚರಿಕೆ ನೀಡುವ ಸಾಧ್ಯತೆಯಿದೆ.

ಹಲವು ಬಾರಿ ಹೈಕಮಾಂಡ್ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆ ವಹಿಸಿದೆ. ಹಾಗಿದ್ದರೂ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಹೇಳಿಕೆ ನೀಡಿ ಮುಜುಗರ ತಂದಿಡುತ್ತಿದ್ದಾರೆ. ಇದೀಗ ಸುರ್ಜೇವಾಲ ಭೇಟಿಯಿಂದಾದರೂ ಅಸಮಾಧಾನಗಳು ಮರೆಯಾಗುತ್ತಾ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ