ಕಿಡ್ನಿ, ಅತಿಯಾದ ಮಧುಮೇಹ ಬಾಧೆ: ಹೆಚ್ಚಿನ ಚಿಕಿತ್ಸೆಗಾಗಿ ಜಯಲಲಿತಾ ಸಿಂಗಾಪುರಕ್ಕೆ

ಶನಿವಾರ, 24 ಸೆಪ್ಟಂಬರ್ 2016 (11:14 IST)
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ. 

ಅವರಿಗೆ ಅತಿಯಾದ ಮಧುಮೇಹ ಮತ್ತು ಕಿಡ್ನಿ ಸಮಸ್ಯೆ ಉಂಟಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಪ್ರಯಾಣ ಬೆಳಸಲಿದ್ದಾರೆ ಎಂದು ಮಾಹಿತಿ ಲಭಿಸಿದೆ. 
 
ಅನಾರೋಗ್ಯದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಜಯಲಲಿತಾ (68) ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ನೋಡಿಕೊಳ್ಳಲಾಗುತ್ತಿತ್ತು. ಮತ್ತೀಗ ಅವರು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ತಿಳಿದು ಬಂದಿದೆ. 
 
'ಅಮ್ಮ' ಆಸ್ಪತ್ರೆ ಸೇರಿರುವುದರಿಂದ ಆತಂಕಕ್ಕೆ ಒಳಗಾಗಿರುವ ನೂರಾರು ಅನುಯಾಯಿಗಳು, ಕಾರ್ಯಕರ್ತರು ಗುರುವಾರ ರಾತ್ರಿಯಿಂದ ಆಸ್ಪತ್ರೆಯ ಮುಂದೆ ಜಮಾಯಿಸಿದ್ದು, ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. 
 
ಈ ಹಿಂದೆ ಕೂಡ ಅವರ ಅನಾರೋಗ್ಯದ ಬಗ್ಗೆ ಊಹಾಪೋಹಗಳು ಹರಿದಾಡುತ್ತಿದ್ದವು. ಆದರೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿರುವ ಬಗ್ಗೆ ಅಧಿಕೃತ ಪ್ರಕಟನೆಯನ್ನು ಹೊರಡಿಸಿರುವುದು ಇದೇ ಮೊದಲು.  
 
ಕಳೆದ ಕೆಲ ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪವಾಗಿತ್ತು. ಮುಖ್ಯಮಂತ್ರಿ ಕಾರ್ಯಾಲಯಕ್ಕೆ ಬಂದು ತಮ್ಮ ಸಚಿವಾಲಯದಿಂದ ಕಾರ್ಯ ನಿರ್ವಹಿಸದೇ ಮನೆಯಿಂದಲೇ ಅವರು ರಾಜ್ಯಭಾರವನ್ನು ಸಂಭಾಳಿಸುತ್ತಿದ್ದರು. ಈ ಕುರಿತು ವಿರೋಧ ಪಕ್ಷ ಡಿಎಂಕೆ ಸದಾ ಪ್ರಶ್ನೆಯನ್ನು ಎತ್ತುತ್ತಲೇ ಇತ್ತು. ಸಿಎಂ ಆರೋಗ್ಯ ಹೇಗಿದೆ ಎಂಬ ಮಾಹಿತಿ ನೀಡಿ ಎಂಬ ವಿರೋಧ ಪಕ್ಷ ಒತ್ತಾಯಿಸುತ್ತಿದ್ದರೂ ಜಯಲಲಿತಾ ಅದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ