ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ ಲಖಿಂಪುರ ಖೇರಿ ಜಿಲ್ಲೆಯ ಮುಸ್ತಫಾಬಾದ್ ಗ್ರಾಮವನ್ನು 'ಕಬೀರ್ಧಾಮ್' ಎಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಿದ್ದಾರೆ.
ಸಂತ ಕಬೀರ್ ಅವರೊಂದಿಗೆ ನಂಟು ಹೊಂದಿರುವ ಪ್ರದೇಶದ ಇತಿಹಾಸ ಮತ್ತು ಸಾಂಸ್ಕೃತಿಕ ಗುರುತನ್ನು ಉಳಿಸುವ ಸಲುವಾಗಿ ಗ್ರಾಮದ ಹೆಸರನ್ನು ಮರುನಾಮಕರಣ ಮಾಡಿರುವುದಾಗಿ ಅವರು ಹೇಳಿದರು.
"ಸ್ಮೃತಿ ಮಹೋತ್ಸವ ಮೇಳ 2025" ರ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್ ಅವರು, ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ ಸೈಟ್ಗಳನ್ನು ಪುನರುಜ್ಜೀವನಗೊಳಿಸಲು ಸರ್ಕಾರ ಈಗ ಹಣವನ್ನು ಖರ್ಚು ಮಾಡುತ್ತಿದೆ ಎಂದರು.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜಾತ್ಯತೀತತೆಯ ಹೆಸರಿನಲ್ಲಿ ಸ್ಥಳದ ಗುರುತನ್ನು ಬದಲಾಯಿಸುವುದು ಬೂಟಾಟಿಕೆ ಮತ್ತು ಜಾತ್ಯತೀತತೆಯ ನೆಪದಲ್ಲಿ ಪರಂಪರೆಯನ್ನು ಅಳಿಸುವ ಯುಗ ಕೊನೆಗೊಂಡಿದೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಮುಸ್ಲಿಂ ಜನಸಂಖ್ಯೆ ಇಲ್ಲದಿದ್ದರೂ ಗ್ರಾಮಕ್ಕೆ ಮುಸ್ತಫಾಬಾದ್ ಎಂದು ಹೆಸರಿಟ್ಟಿರುವುದು ಅಚ್ಚರಿ ಮೂಡಿಸಿದೆ ಎಂದರು.