ಲೋಕಪಾಲ್ ಜಾರಿಗೊಳಿಸಿ ಇಲ್ಲದಿದ್ರೆ ಹೋರಾಟ: ಪ್ರಧಾನಿ ಮೋದಿಗೆ ಅಣ್ಣಾ ಹಜಾರೆ ಎಚ್ಚರಿಕೆ

ಬುಧವಾರ, 30 ಆಗಸ್ಟ್ 2017 (15:29 IST)
ಲೋಕಪಾಲರನ್ನು ನೇಮಕ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ  ಮತ್ತೊಂದು ಸುತ್ತಿನ ಹೋರಾಟವನ್ನು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಸಿದ್ದವಾಗುತ್ತಿದ್ದು ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವುದಾಗಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಭದ್ರತೆ ಮತ್ತು ರೈತರ ಕಲ್ಯಾಣ ಹಾಗೂ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ಮತ್ತು ಲೋಕಾಯುಕ್ತರನ್ನು ನೇಮಕ ಮಾಡುವವರೆಗೂ ಚಳವಳಿಯನ್ನು ಮುಂದುವರೆಸಲಾಗುವುದು. ಮೋದಿ ಸರಕಾರದ ಹೇಳಿಕೆ ಮತ್ತು ಕಾರ್ಯದಲ್ಲಿ ತುಂಬಾ ವ್ಯತ್ಯಾಸವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಪ್ರಸಕ್ತ ವರ್ಷದ ಮಾರ್ಚ್ ತಿಂಗಳಲ್ಲಿ ಪ್ರದಾನಿ ಮೋದಿಗೆ ಪತ್ರ ಬರೆದ ಹಜಾರೆ, ಭ್ರಷ್ಟಾಚಾರ ನಿರ್ಮೂಲನೆಗೊಳಿಸುವ ಸರಕಾರದ ಭರವಸೆ ಈಡೇರಿಲ್ಲ. ಪ್ರಧಾನಿ ಮೋದಿಯವರಿಗೆ ಮತ್ತೊಂದು ಪತ್ರ ಬರೆದು ಪ್ರತಿಭಟನೆ ಆರಂಭಿಸುವ ದಿನಾಂಕವನ್ನು ಘೋಷಿಸುತ್ತೇನೆ ಎಂದು ತಿಳಿಸಿದ್ದಾರೆ. 
 
ಕಳೆದ ಮೂರು ವರ್ಷಗಳ ಪ್ರಧಾನಿ ಮೋದಿ ಅಡಳಿತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಭ್ರಷ್ಟಾಚಾರ ಎಂದಿನಂತೆ ಮುಂದುವರಿದಿದೆ. ಒಂದು ವೇಳೆ, ವಿಪಕ್ಷ ನಾಯಕ ಗೈರುಹಾಜರಿಯಲ್ಲಿ ಸಿಬಿಐ ನಿರ್ದೇಶಕರ ನೇಮಕ ಮಾಡುುವುದಾದರೇ ಲೋಕಾಪಾಲ್‌ರನ್ನು ಯಾಕೆ ನೇಮಕ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
 
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಲೋಕಾಯುಕ್ತರನ್ನು ನೇಮಕ ಮಾಡಲಾಗಿಲ್ಲ. ಪ್ರಧಾನಿಯವರ ಆದೇಶವನ್ನು ಬಿಜೆಪಿ ಅಡಳಿತವಿರುವ ರಾಜ್ಯಗಳು ಪಾಲಿಸುವುದಿಲ್ಲ ಎನ್ನುವುದು ನಂಬಲು ಸಾದ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 
2011ರಲ್ಲಿ ರಾಮ್‌ಲೀಲಾ ಮೈದಾನದಲ್ಲಿ ನಡೆದ ಉಪವಾಸ ಸತ್ಯಾಗ್ರಹ ರಾಷ್ಟ್ರವ್ಯಾಪಿ ಗಮನ ಸೆಳೆದಿದ್ದರಿಂದ ಸಂಸತ್ತಿನಲ್ಲಿ ಲೋಕಪಾಲ್ ಮಸೂದೆ ಅಂಗೀಕರಿಸಲು ಸಾಧ್ಯವಾಯಿತು. ಪ್ರಸ್ತುತ ಮೋದಿ ಸರಕಾರ ಲೋಕಪಾಲ್‌ರನ್ನು ನೇಮಕ ಮಾಡಲು ಹಿಂದೇಟು ಹಾಕುತ್ತಿರುವುದರಿಂದ ಹೋರಾಟ ಬಿಟ್ಟು ಬೇರೆ ದಾರಿಯಿಲ್ಲ ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಎಂದು ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ