ಕಳೆದ ಭಾನುವಾರ ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾನೆಲೆಯ ಮೇಲೆ ನಡೆದ ಭೀಕರ ದಾಳಿ ಸಂಪೂರ್ಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ದೇಶಾದ್ಯಂತ ಶೋಕಾಚರಣೆ ನಡೆಯುತ್ತಿದೆ. ಯಾರು ಎಷ್ಟೇ ಪರಿತಪಿಸುತ್ತಿರಬಹುದು ಆದರೆ ಹುತಾತ್ಮ ಸೈನಿಕರಲ್ಲಿ ಒಬ್ಬನಾದ ಎಸ್.ಕೆ ವಿದ್ಯಾರ್ಥಿ ತಂದೆ ಮಥುರಾ ಯಾದವ್ ಸಂಕಟ ಮಾತ್ರ ಹೇಳತೀರದಂತಾಗಿದೆ.
ಮಗನ ಸಾವಿನಿಂದ ಆಘಾತಗೊಂಡಿರುವ ಅವರು ಕೇಂದ್ರ ಸರ್ಕಾರಕ್ಕೆ ಪ್ರತೀಕಾರ ತೆಗೆದುಕೊಳ್ಳಿ ಎಂದು ಆಗ್ರಹಿಸಿದ್ದಾರೆ.
ನನಗೆ ವಯಸ್ಸಾಗಿದೆ. ಆದರೂ ಗಡಿಯಲ್ಲಿ ಹೋರಾಡಲು ನಾನು ಸಿದ್ಧ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲೇ ಬೇಕು. ಪ್ರತೀಕಾರ ತೀರಿಸಿಕೊಳ್ಳದಿದ್ದರೆ ನಾನು ನನ್ನ ಉಳಿದ ಮಕ್ಕಳನ್ನು ಸೈನ್ಯಕ್ಕೆ ಸೇರಿಸಲಾರೆ ಎಂದು ಅವರು ಹೇಳಿದ್ದಾರೆ.
ಮೃತ ಸೈನಿಕರ ಪುತ್ರಿ ಆರ್ತಿ ಕುಮಾರಿ ಅವಕಾಶ ಸಿಕ್ಕಿದರೆ ತಾನು ಅಪ್ಪನಂತೆ ಸೈನ್ಯ ಸೇರುತ್ತೇನೆ ಎನ್ನುವುದರ ಮೂಲಕ ದಿಟ್ಟತನವನ್ನು ಮೆರೆಯುತ್ತಾಳೆ.
ನಾವು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲೇಬೇಕು. ನನ್ನ ತಂದೆಯ ಬಗ್ಗೆ ಹೆಮ್ಮೆ ಪಡುತ್ತೇನೆ. ಅವರು ಸಾಯಲಿಲ್ಲ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ನಾನು ದೆಹಲಿಯ ಐಐಟಿಗೆ ಸೇರಬೇಕೆಂದು ಬಯಸಿದ್ದೆ. ಈಗ ಅದು ಸಾಧ್ಯವಾಗುತ್ತದೆಯೋ ಇಲ್ಲ ಎಂಬುದು ಭವಿಷ್ಯಕ್ಕೆ ಬಿಟ್ಟಿದ್ದು. ಅವಕಾಶ ಸಿಕ್ಕಿದರೆ ನಾನು ಸೈನ್ಯ ಸೇರುತ್ತೇನೆ ಎನ್ನುತ್ತಾಳೆ ಅವಳು.
1999ರಲ್ಲಿ ಸೈನ್ಯ ಸೇರಿದ್ದ ವಿದ್ಯಾರ್ಥಿಗೆ ಆರ್ತಿ, ಅನ್ಶು, ಅನ್ಶಿಕಾ ಮತ್ತು ಆರ್ಯನ್ ಎಂಬ ನಾಲ್ಕು ಮಕ್ಕಳಿದ್ದಾರೆ.
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಹುತಾತ್ಮ ವಿದ್ಯಾರ್ಥಿ ಕುಟುಂಬಕ್ಕೆ 5 ಲಕ್ಷ ರೂಪಾಯಿಯನ್ನು ಘೋಷಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ