ಆಪ್ ಶಾಸಕರ ವಿರುದ್ಧ ಸುಳ್ಳು ಕೇಸ್: ಕೇಜ್ರಿವಾಲ್‌ರಿಂದ ಸೆ.30 ರಂದು ಸ್ಫೋಟಕ ಸಂಚು ಬಹಿರಂಗ

ಮಂಗಳವಾರ, 27 ಸೆಪ್ಟಂಬರ್ 2016 (20:39 IST)
ಆಮ್ ಆದ್ಮಿ ಪಕ್ಷದ ಶಾಸಕರ, ಸಚಿವರ ವಿರುದ್ಧ ಸುಳ್ಳು ಕೇಸ್‌ಗಳನ್ನು ದಾಖಲಿಸುತ್ತಿರುವ ಹಿಂದಿನ ಭಾರಿ ಷಡ್ಯಂತ್ರವನ್ನು ಶುಕ್ರವಾರದಂದು ಬಹಿರಂಗಪಡಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
 
ದೆಹಲಿ ವಿಧಾನಸಭೆಯಲ್ಲಿ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಕೇಜ್ರಿವಾಲ್, ಆಪ್ ಮುಖಂಡರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿರುವ ಹಿಂದೆ ಸಂಚಿದೆ ಎಂದು ಆರೋಪಿಸಿದರು.
 
ದೆಹಲಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಮತ್ತು ಚಿಕನ್‌ಗುನ್ಯಾ ರೋಗಗಳ ನಿಯಂತ್ರಣ, ಆಪ್ ಶಾಸಕರ ವಿರುದ್ಧ ತಪ್ಪು ಎಫ್‌ಐಆರ್‌ಗಳ ದಾಖಲಿಕೆ ಕುರಿತಂತೆ ಚರ್ಚಿಸಲು ದೆಹಲಿ ಸಚಿವ ಸಂಪುಟ ನಿರ್ಧರಿಸಿತ್ತು ಎಂದು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ.
 
ಆಪ್ ಶಾಸಕರು, ಸಚಿವರ ವಿರುದ್ಧ ಸುಳ್ಳು ಕೇಸ್‌ಗಳನ್ನು ದಾಖಲಿಸಲಾಗುತ್ತದೆ. ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸಿಬಿಐ ರೈಡ್ ಮಾಡಲಾಗಿದೆ ಯಾಕೆ? ಇದರ ಹಿಂದಿರುವ ಸಂಚು ಶುಕ್ರವಾರದಂದು ಬಟಾ ಬಯಲು ಮಾಡುತ್ತೇನೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. 
 
ದೆಹಲಿ ಮಹಿಳಾ ಆಯೋಗದಲ್ಲಿ ಅವ್ಯವಹಾರ ನಡೆದಿವೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳ, ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ. 
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ