ಹಾಗಾದ್ರೆ 'ಮಿಲನ' ಪ್ರಕಾಶ್ ವಿಜಿ ಸಿನಿಮಾ ಮಾಡಲ್ವೇ?

PR
'ಗೋಕುಲ'ದಿಂದ ಕಾಣೆಯಾಗಿದ್ದ ಪ್ರಕಾಶ್ ಮತ್ತೆ ಸ್ಯಾಂಡಲ್‌ವುಡ್‌ಗೆ ಬರುತ್ತಾರೆ, ದುನಿಯಾ ವಿಜಯ್ ನಾಯಕನಾಗಿರುವ ಚಿತ್ರವೊಂದನ್ನು ನಿರ್ದೇಶಿಸುತ್ತಾರೆ. ಈ ಚಿತ್ರವನ್ನು ತೆಲುಗಿನಲ್ಲಿ ಶ್ರೀಕಾಂತ್ 100ನೇ ಸಿನಿಮಾದ ನಿರ್ಮಾಪಕ ಸಿ.ಆರ್. ಮನೋಹರ್ ನಿರ್ಮಿಸುತ್ತಾರೆ ಎಂದೆಲ್ಲ ಸುದ್ದಿಯಾಗಿತ್ತು.

ಆದರೆ ಅದೀಗ ಮತ್ತೆ ಸುಳ್ಳಾಗಿದೆ. ಈ ಹಿಂದೆಯೂ ಪ್ರಕಾಶ್ ಮತ್ತೆ ಸಿನಿಮಾ ಮಾಡುತ್ತಾರಂತೆ ಎಂದೆಲ್ಲ ಗುಲ್ಲುಗಳೆದ್ದಿದ್ದವು. ಅದೇ ಸಾಲಿಗೆ ದುನಿಯಾ ವಿಜಯ್ ಪ್ರೊಜೆಕ್ಟ್ ಕೂಡ ಸೇರಿಕೊಂಡಂತಿದೆ.

'ಖುಷಿ' ಎಂಬ ವಿಭಿನ್ನ ಚಿತ್ರದೊಂದಿಗೆ ನಿರ್ದೇಶಕನ ಟೋಪಿ ಧರಿಸಿದ ಪ್ರಕಾಶ್, ನಂತರ ಪ್ರಾಣ, ಋಷಿ, ಶ್ರೀ, ಮಿಲನ, ವಂಶಿ, ಗೋಕುಲ ಚಿತ್ರಗಳನ್ನು ನಿರ್ದೇಶಿಸಿ ಹೆಸರು ಮಾಡಿದರು. ಬಹುತೇಕ ಈ ಎಲ್ಲಾ ಚಿತ್ರಗಳಲ್ಲೂ ಪ್ರಕಾಶ್ ಮೆಚ್ಚುಗೆಗೆ ಪಾತ್ರರಾದರೂ, ನಿರ್ಮಾಪಕರ ಜೇಬು ತುಂಬಿಸಿದ ಚಿತ್ರಗಳು ಕೆಲವೇ ಕೆಲವು. ಋಷಿ, ಮಿಲನ ಮತ್ತು ವಂಶಿ ಚಿತ್ರಗಳಷ್ಟೇ ಬಾಕ್ಸಾಫೀಸಿನಲ್ಲಿ ಸದ್ದು ಮಾಡಿದವು.

ಅಷ್ಟೇ ಆಗಿದ್ದರೆ ಪ್ರಕಾಶ್ ಇಂದೂ ಚಿತ್ರರಂಗದಿಂದ ದೂರ ಉಳಿಯುತ್ತಿರಲಿಲ್ಲ. ಅವರು ಮಾಡಿದ ತಪ್ಪು ನಿರ್ಮಾಣಕ್ಕೆ ಕೈ ಹಾಕಿದ್ದು. ವಿಜಯ ರಾಘವೇಂದ್ರ, ಪೂಜಾ ಗಾಂಧಿ ಪ್ರಮುಖ ಪಾತ್ರಗಳಲ್ಲಿದ್ದ 'ಗೋಕುಲ' ಚಿತ್ರವನ್ನು ಅವರೇ ನಿರ್ಮಿಸಿದ್ದರು. ಚಿತ್ರ ಮಕಾಡೆ ಮಲಗಿತ್ತು. ಪ್ರಕಾಶ್ ಧಾರಾವಾಹಿಗಳತ್ತ ವಾಲಲು ಇಷ್ಟೇ ಸಾಕಾಯಿತು.

ಟಿವಿಯತ್ತ ಮನಸ್ಸು ಹರಿಸಿದವರನ್ನು ಕೈ ಬೀಸಿ ಕರೆದದ್ದು ಸುವರ್ಣ ವಾಹಿನಿ. ಅಲ್ಲಿ ಲಕುಮಿ, ಬೊಂಬೆಯಾಟವಯ್ಯ ಧಾರಾವಾಹಿಗಳಲ್ಲಿ ಮಿಂಚಿದರು. ಈಗ ಜೀಟಿವಿಗಾಗಿ 'ಕನಕ' ಕೈಗೆತ್ತಿಕೊಂಡಿದ್ದಾರೆ.

'ಕನಕ' ಸೀರಿಯಲ್ ಜೀ ಕನ್ನಡದಲ್ಲಿ ಜುಲೈ 2ರಂದು ಆರಂಭವಾಗಿದೆ. ಈ ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

'ಲಕುಮಿ'ಯಲ್ಲಿ ದೊಡ್ಡ ಹೆಸರು ಮಾಡಿದ ಸುಷ್ಮಾ 'ಕನಕ'ದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅವರಿಲ್ಲಿ ಕಂಡಕ್ಟರ್. ಮಹಿಳಾ ಕಂಡಕ್ಟರುಗಳ ಜೀವನದ ಮೇಲೆ ಬೆಳಕು ಚೆಲ್ಲುವ ಧಾರಾವಾಹಿ ಭಿನ್ನವಾಗಿದೆ ಎಂದು ಚಾನೆಲ್ ಮುಖ್ಯಸ್ಥರು ತಿಳಿಸಿದ್ದಾರೆ.

ಧಾರಾವಾಹಿಯಲ್ಲಿ ಸುನಿಲ್ ಪುರಾಣಿಕ್, ಋತು, ಗೌತಮ್, ಬಿ.ಎಂ. ವೆಂಕಟೇಶ್, ಖುಷಿ, ವೀಣಾ ವೆಂಕಟೇಶ್ ಮುಂತಾದವರು ನಟಿಸುತ್ತಿದ್ದಾರೆ. ಭಾರತೀಶ್ ಸಂಚಿಕೆ ನಿರ್ದೇಶಕ, ಶಂಕರ್ ಬಿಲ್ಲೇಮನೆ ಚಿತ್ರಕಥೆ, ಕೇಶವ್ ಚಂದ್ರ ಸಂಭಾಷಣೆ 'ಕನಕ'ಳಿಗಿದೆ.

ಇದರೊಂದಿಗೆ ಇನ್ನೂ ಒಂದಷ್ಟು ಸಮಯ ಪ್ರಕಾಶ್ ಸ್ಯಾಂಡಲ್‌ವುಡ್‌ನತ್ತ ತಲೆ ಹಾಕುವುದು ಅಸಾಧ್ಯ ಅನ್ನೋದು ಖಾತ್ರಿಯಾಗಿದೆ.

ವೆಬ್ದುನಿಯಾವನ್ನು ಓದಿ