ವಿದ್ಯಾರ್ಥಿಗಳ ಬ್ಯಾಗ್ ಮೇಲೆ ರಾಜಕೀಯ ನಾಯಕರ ಚಿತ್ರ ಮುದ್ರಿಸುವಂತಿಲ್ಲ: ಹೈಕೋರ್ಟ್ ಆದೇಶ

ಬುಧವಾರ, 8 ಸೆಪ್ಟಂಬರ್ 2021 (11:54 IST)
ಚೆನ್ನೈ, ಸೆ 08 : ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರವು ಉಚಿತವಾಗಿ ಬ್ಯಾಗ್ ಹಾಗೂ ಪಠ್ಯ ಪುಸ್ತಕಗಳನ್ನು ವಿತರಿಸುತ್ತದೆ. ಈ ಸಾಮಾಗ್ರಿಗಳ ಮೇಲೆ ಮುಖ್ಯಮಂತ್ರಿ ಅಥವಾ ಯಾವುದೇ ರಾಜಕೀಯ ನಾಯಕರ ಚಿತ್ರಗಳನ್ನು ಮುದ್ರಿಸಬಾರದು ಎಂದು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.

ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಪಿ.ಟಿ. ಆದಿಕೇಶವಲು ದ್ವಿಸದಸ್ಯ ನ್ಯಾಯಪೀಠವು ಈ ಆದೇಶ ಹೊರಡಿಸಿದೆ.
ಶಾಲಾ ಮಕ್ಕಳಿಗೆ ಮತದಾನದ ಹಕ್ಕು ಇರುವುದಿಲ್ಲ. ಪುಸ್ತಕ, ಬ್ಯಾಗ್ ಎಲ್ಲದರ ಮೇಲೆಯೂ ರಾಜಕಾರಣಿಗಳ ಫೋಟೋ ನೋಡಿ ಮಕ್ಕಳು ಬೇಸರ ಪಟ್ಟುಕೊಳ್ಳುತ್ತಾರೆ ಎಂದು ನ್ಯಾಯಪೀಠ ಹೇಳಿದೆ. ನಾಯಕರ ಚಿತ್ರ ಮುದ್ರಿಸಲು ಸಾರ್ವಜನಿಕರ ಹಣ ಬಳಸುವುದು ಸರಿಯಲ್ಲ, ಸರ್ಕಾರ ಬದಲಾದಾಗೊಮ್ಮೆ ಚಿತ್ರ ಬದಲಿಸುವುದು ಮುಂದುವರಿಯದಿರಲಿ ಎಂದು ಮದ್ರಾಸ್ ಹೈಕೋರ್ಟ್ ಸೂಚಿಸಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶಾಲಾ ಮಕ್ಕಳ ಬ್ಯಾಗ್ ಮೇಲೆ ಮುದ್ರಿಸಿರುವ ಮಾಜಿ ಮುಖ್ಯಮಂತ್ರಿಗಳಾದ ಜೆ. ಜಯಲಲಿತಾ ಮತ್ತು ಎಡಪ್ಪಾಡಿ ಕೆ. ಪಳನಿಸ್ವಾಮಿ ಚಿತ್ರ ತೆಗೆಯದಂತೆ ಶಿಕ್ಷಣ ಇಲಾಖೆಗೆ ಸೂಚಿಸಿದ್ದರು. ಚಿತ್ರ ಬದಲಿಸಿದರೆ ಬೊಕ್ಕಸಕ್ಕೆ 13 ಕೋಟಿ ರೂ. ಹೊರೆಯಾಗುತ್ತದೆ ಎಂದು ತಮಿಳುನಾಡು ಸರ್ಕಾರ ತಿಳಿಸಿತ್ತು.
ಕೊರೊನಾ ಸೋಂಕಿಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆ ಏರಿಕೆ
ಸಂಭಾವ್ಯ ಕೊರೊನಾ ಮೂರನೇ ಅಲೆ ಭೀತಿ ನಡುವೆ ತಮಿಳುನಾಡಿನಲ್ಲಿ ಸೋಂಕಿಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದು ಆರೋಗ್ಯ ತಜ್ಞರ ಆತಂಕ ಹೆಚ್ಚಿಸಿದೆ. ಆದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಮಕ್ಕಳ ಸಂಖ್ಯೆ ತೀರ ಕಡಿಮೆಯಿದೆ ಎಂದು ಹೇಳಿದ್ದಾರೆ.
ತಮಿಳುನಾಡು ಆರೋಗ್ಯ ಇಲಾಖೆ ವರದಿ ಪ್ರಕಾರ ಜನವರಿ ತಿಂಗಳಿನಲ್ಲಿ 20,326 ಮಕ್ಕಳಿಗೆ, ಅಂದರೆ ಶೇ.6ರಷ್ಟು ಮಕ್ಕಳಿಗೆ ಕೊರೊನಾ ಸೋಂಕು ತಗುಲಿತ್ತು. ಮೇ ತಿಂಗಳಿನ ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ 71,555 ಮಕ್ಕಳು ಸೋಂಕಿಗೆ ತುತ್ತಾಗಿದ್ದರು. ಪ್ರಕರಣಗಳ ಸಂಖ್ಯೆ ಕುಸಿದಿದ್ದರೂ ಶೇಕಡಾವಾರು ಸಂಖ್ಯೆ ಏರಿಕೆಯಾಗಿದ್ದು, ಜೂನ್ನಲ್ಲಿ ಈ ಸಂಖ್ಯೆ ಶೇ.8.8 ಇದ್ದರೆ, ಜುಲೈ ತಿಂಗಳಿನಲ್ಲಿ ಶೇ.9.5 ಹಾಗೂ ಆಗಸ್ಟ್ನಲ್ಲಿ ಶೇ.10ಕ್ಕೆ ಏರಿಕೆಯಾಗಿರುವುದಾಗಿ ತಿಳಿಸಿದೆ.
"ಸಂಭಾವ್ಯ ಕೊರೊನಾ ಮೂರನೇ ಅಲೆಯಲ್ಲಿ ಭಾರತದಲ್ಲಿ ಸೋಂಕಿಗೆ ತುತ್ತಾಗುವ ಮಕ್ಕಳ ಪ್ರಮಾಣವು ಶೇ.12 ಆಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಅಷ್ಟು ಮಕ್ಕಳಲ್ಲಿ ಶೇ.5ರಷ್ಟು ಮಕ್ಕಳು ಮಾತ್ರ ಆಸ್ಪತ್ರೆಗೆ ದಾಖಲಾಗಬಹುದು ಹಾಗೂ ಆಸ್ಪತ್ರೆಗೆ ದಾಖಲಾದ ಎಲ್ಲಾ ಮಕ್ಕಳ ಸ್ಥಿತಿಯೂ ಗಂಭೀರವಾಗುವುದಿಲ್ಲ,'' ಎಂದು ಹೇಳಿದೆ.
"ಚೆನ್ನೈನಲ್ಲಿನ ಮಕ್ಕಳ ಆರೋಗ್ಯ ಸಂಸ್ಥೆಗೆ ಸೋಂಕಿನಿಂದ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಕಡಿಮೆಯೇ ಇದೆ. ಕೇವಲ ನಾಲ್ಕರಿಂದ ಎಂಟು ಮಕ್ಕಳು ಮಾತ್ರ ಆಸ್ಪತ್ರೆಗೆ ಸೇರಿದ್ದಾರೆ ಹಾಗೂ ಈ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಲಕ್ಷಣರಹಿತ ಅಥವಾ ಸೌಮ್ಯವಾದ ಲಕ್ಷಣ ಹೊಂದಿದ್ದ ಪ್ರಕರಣಗಳಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯಿದೆಯಷ್ಟೆ,'' ಎಂದು ಆರೋಗ್ಯ ಇಲಾಖೆ ವಿವರಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ