ನಿತ್ಯಾನಂದ ಸ್ವಾಮಿ ಐಟಂ ಸಾಂಗ್‌ನಲ್ಲಿ ಕುಣೀತಾರಾ?

PR
ಬಿಡದಿಯ ವಿವಾದಿತ ಪರಮಹಂಸ ನಿತ್ಯಾನಂದ ಸ್ವಾಮಿ ಸಿನಿಮಾದಲ್ಲೂ ನಟಿಸ್ತಾರಾ? 'ಸ್ವಾಮೀಜಿ ಐ ಲವ್ ಯೂ' ಚಿತ್ರದ ಐಟಂ ಸಾಂಗ್‌ನಲ್ಲಿ ಕುಣೀತಾರಾ? ಗೊತ್ತಿಲ್ಲ. ಇಂತಹ ಓತಪ್ರೋತ ಹೇಳಿಕೆಗಳನ್ನು ನೀಡಿರೋದು 'ನೈಸ್' ಅಶೋಕ್ ಖೇಣಿ!

ಬೆಂಗಳೂರಿನಲ್ಲಿ ದೊಡ್ಡ ಫಿಲಂ ಸಿಟಿ ಮಾಡ್ತೇನೆ, ಈ ವರ್ಷ ಹಿಂದಿಯಲ್ಲಿ ಹತ್ತು ಸಿನಿಮಾ ನಿರ್ಮಿಸ್ತೇನೆ, ಕನ್ನಡ ಚಿತ್ರರಂಗವನ್ನು ದೇಶದಲ್ಲೇ ನಂಬರ್ ವನ್ ಮಾಡ್ತೇನೆ -- ಹೀಗೆ ಅಶೋಕ್ ಖೇಣಿ ಕಳೆದ ನಾಲ್ಕೈದು ವರ್ಷಗಳಲ್ಲಿ ನೀಡಿರುವ ಹೇಳಿಕೆಗಳಿಗೆ ಲೆಕ್ಕವಿಲ್ಲ. ಹಿಂದೆ ಮುಂದೆ ನೋಡದೆ ಹೇಳಿಕೆ ನೀಡುವುದರಲ್ಲಿ ಅವರು ನಿಸ್ಸೀಮ. ಅದು ಪ್ರಚಾರದ ದೃಷ್ಟಿಯಿಂದಲೋ ಅಥವಾ ಬೇರೆ ಇನ್ಯಾವ ಕಾರಣಕ್ಕೋ ಗೊತ್ತಿಲ್ಲ, ಅಂತಹ ಹೇಳಿಕೆಗಳು ಅವರಿಂದ ಮಾಮೂಲು.

ಇದು 'ಪಾರು ಐ ಲವ್ ಯೂ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಡೆದ ಪ್ರಸಂಗ. ವಿಕ್ರಾಂತ ಮಠದ ಶ್ರೀ ಗುರುಬಸವೇಶ್ವರ ಸ್ವಾಮೀಜಿ ಪಕ್ಕದಲ್ಲೇ ಇದ್ದ ಖೇಣಿ, ತಾನು 'ಸ್ವಾಮೀಜಿ ಐ ಲವ್ ಯೂ' ಎಂಬ ಸಿನಿಮಾ ಮಾಡಲಿದ್ದೇನೆ. ಆ ಚಿತ್ರದಲ್ಲಿ ಗುರುಬಸವೇಶ್ವರ ಸ್ವಾಮೀಜಿಯೇ ಹೀರೋ, ನಿತ್ಯಾನಂದ ಸ್ವಾಮಿ ಐಟಂ ಸಾಂಗ್‌ಗೆ ಕುಣಿಯುತ್ತಾರೆ ಎಂದು ಹೇಳಿ ಬಿಟ್ಟರು.

ಪಕ್ಕದಲ್ಲಿದ್ದವರಿಗೆ ಆಶ್ಚರ್ಯ. ಆದರೆ ಖೇಣಿಯನ್ನು ಬಲ್ಲವರಿಗೆ ಇದು ತಲೆಬುಡವಿಲ್ಲದ ಹೇಳಿಕೆ ಎಂದೆನಿಸಿತು.

ಖೇಣಿ ಹೇಳಿಕೆಗಳ ಪರ್ವ ಇಷ್ಟಕ್ಕೇ ಮುಗಿಯಲಿಲ್ಲ. ನಾಯಕಿ ನೀತು ಅವರನ್ನೂ ಕಾಡಿದರು. "ಪಾರು ಐ ಲವ್ ಯೂ ಚಿತ್ರ ಚೆನ್ನಾಗಿ ಬಂದಿದೆ. ನಾಯಕ ರಂಜನ್ ನಾಯಕಿ ನೀತುವನ್ನು ಚೆನ್ನಾಗಿ ಅಪ್ಪಿಕೊಳ್ಳುತ್ತಾರೆ" ಎಂದರು. ಪಕ್ಕದಲ್ಲಿದ್ದ ನೀತು ಕಕ್ಕಾಬಿಕ್ಕಿಯಾಗಿ ದಾರಿ ಕಾಣದೆ ನಕ್ಕು ಬಿಟ್ಟರು.

ಈ ನಡುವೆ 15 ಕೋಟಿ ರೂಪಾಯಿ ವೆಚ್ಚದಲ್ಲಿ ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಗಳತ್ತ ಖೇಣಿ ಚಿತ್ತ ಹರಿಯಿತು. 'ಪಾರು ಐ ಲವ್ ಯೂ' ಚಿತ್ರಕ್ಕಾಗಿ ನಿರಂಜನ್ ಮತ್ತು ಸುನಿಲ್ ಹುಬ್ಬಳ್ಳಿ ಕೇವಲ 1.5 ಕೋಟಿ ರೂಪಾಯಿಗಳನ್ನಷ್ಟೇ ಹಾಕಿದ್ದಾರೆ. ಮುಂದಿನ ಎರಡೇ ವರ್ಷದಲ್ಲಿ ಸುನಿಲ್ ನಂಬರ್ ವನ್ ನಿರ್ದೇಶಕರಾಗುತ್ತಾರೆ ಎಂಬ ಭರವಸೆ ನನಗಿದೆ ಎಂದರು.

ವೆಬ್ದುನಿಯಾವನ್ನು ಓದಿ