ಮದಿರೆ ಸೇವಿಸುವ ದೇವಿ- ಮಾ ಕಾವಲ್ಕಾ

ಗಾಯತ್ರಿ ಶರ್ಮಾ
ಈ ಬಾರಿಯ ನೀವು ನಂಬುವಿರಾ ಸರಣಿಯಲ್ಲಿ ನೀವು ತಿಳಿದುಕೊಳ್ಳಲಿರುವುದು ಭಕ್ತರಿಂದ ಮದಿರೆಯನ್ನು ಸ್ವೀಕರಿಸುವ ದೇವಿಯ ಬಗ್ಗೆ. ಭೈರವನಿಗೆ ಮದಿರೆ ಅರ್ಪಿಸುವ ಬಗ್ಗೆ ಈಗಾಗಲೇ ನೀವು ಇದೇ ಸರಣಿಯಲ್ಲಿ ಕೇಳಿದ್ದೀರಿ. ಆದರೆ ದೇವಿಯು ಮದ್ಯ ಸ್ವೀಕರಿಸುವುದು ರತ್ಲಾಂ ನಗರದ ವಿಶೇಷ.

ರತ್ಲಾಂ ನಗರದಿಂದ 32 ಕಿ.ಮೀ. ದೂರದಲ್ಲಿದೆ ಮಾತೆ ಕಾವಲ್ಕಾ ಮಂದಿರ. ಮಾ ಕಾವಲ್ಕಾ, ಮಾ ಕಾಳಿ ಮತ್ತು ಕಾಳ ಭೈರವ ವಿಗ್ರಹಗಳಿಗೆ ಇಲ್ಲಿ ಮದ್ಯ ಅರ್ಪಿಸಲಾಗುತ್ತದೆ. ದೇವ-ದೇವಿಯರ ಸಂತೃಪ್ತಿಗಾಗಿ ಭಕ್ತರು ಮದಿರೆ ಅರ್ಪಿಸಿ ಪುನೀತರಾಗುತ್ತಾರೆ ಇಲ್ಲಿ. ವಿಗ್ರಹಗಳ ತುಟಿ ಭಾಗದಲ್ಲಿ ಮದಿರೆ ತುಂಬಿದ ಬಟ್ಟಲು ಇರಿಸಿದಾಗ, ಅದರೊಳಗಿದ್ದ ಮದ್ಯವು ಖಾಲಿಯಾಗುತ್ತದೆ ಮತ್ತು ಇದೆಲ್ಲವೂ ನಡೆಯುವುದು ಭಕ್ತರ ಸಮ್ಮುಖದಲ್ಲೇ.
WD


ಮಂದಿರದ ಅರ್ಚಕ ಪಂಡಿತ್ ಅಮೃತಗಿರಿ ಗೋಸ್ವಾಮಿ ಹೇಳುವ ಪ್ರಕಾರ, ಇದು ಸುಮಾರು 300 ವರ್ಷಗಳಷ್ಟು ಹಳೆಯ ಮಂದಿರ. ಇಲ್ಲಿರುವ ವಿಗ್ರಹಗಳಿಗೆ ದೈವೀಕ ಶಕ್ತಿಯಿದೆ ಮತ್ತು ವಿಗ್ರಹಗಳು ಮದ್ಯ ಸೇವಿಸುವುದು ನಿಜ ಸಂಗತಿ.

ದೂರದೂರುಗಳಿಂದ ತಮ್ಮ ಇಷ್ಟಾರ್ಥ ಪೂರೈಸಿಕೊಳ್ಳಲು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಪುತ್ರ ಸಂತಾನಕ್ಕಾಗಿ ಹರಕೆ ಹೊತ್ತಿದ್ದ ರಮೇಶ್ ಎಂಬವರು, ತಮ್ಮ ಅಭೀಷ್ಟೆ ಈಡೇರಿದ ಬಳಿಕ ಹರಕೆ ಸಲ್ಲಿಸಲು ಇಲ್ಲಿಗೆ ಬಂದಿದ್ದಾರೆ. ದೇವಿಯ ಸಂತೃಪ್ತಿಗಾಗಿ ತಾನು ಕುರಿ ಬಲಿಯನ್ನೂ ನೀಡಿದ್ದು, ತನ್ನ ಮಗನ ಮುಡಿ (ತಲೆಕೂದಲು)ಯನ್ನೂ ದೇವಿಗೆ ಅರ್ಪಿಸಿದ್ದಾಗಿ ರಮೇಶ್ ಹೇಳುತ್ತಾನೆ.
WD


ಬಾಟಲಿಯಲ್ಲಿ ಉಳಿದ ಮದ್ಯವನ್ನು ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡಲಾಗುತ್ತದೆ. ಇಷ್ಟಾರ್ಥ ಈಡೇರಿದ ಭಕ್ತರು ಹರಕೆ ಒಪ್ಪಿಸಲು ಬರಿಗಾಲಲ್ಲಿ ಇಲ್ಲಿಗೆ ನಡೆದು ಬರುತ್ತಾರೆ. ಇನ್ನು ಕೆಲವರು ಪ್ರಾಣಿ ಬಲಿಯನ್ನೂ ನೀಡುತ್ತಾರೆ.

ಹರಿಯಾಲೀ ಅಮಾವಾಸ್ಯೆ ಮತ್ತು ನವರಾತ್ರಿ ದಿನಗಳಂದು ಈ ಮಂದಿರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ತಮ್ಮ ಶರೀರವನ್ನು ಆವರಿಸಿರುವ ದುಷ್ಟ ಶಕ್ತಿಗಳನ್ನು ನಿವಾರಿಸಿಕೊಳ್ಳುವುದಕ್ಕಾಗಿಯೂ ಕೆಲವರು ಇಲ್ಲಿಗೆ ಬರುತ್ತಾರೆ.

ವಿಗ್ರಹವೊಂದು ಮದ್ಯ ಸೇವಿಸುತ್ತದೆ ಎಂಬುದನ್ನು ನಂಬಬಹುದೇ? ಅಥವಾ ಇದು ಜನರ ಭ್ರಮೆಯೇ? ಇದರ ಬಗ್ಗೆ ನಿಮಗೇನು ಅನ್ನಿಸುತ್ತದೆ? ನಮಗೆ ಬರೆಯಿರಿ.