ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ ಭಾಗವಾಗಿರುವ ಪಾಕಿಸ್ತಾನದ ಮಾಜಿ ನಾಯಕ ವಾಸಿಮ್ ಅಕ್ರಮ್ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಟೆಲಿವಿಷನ್ ಷೋಗಳಲ್ಲಿ ತಮ್ಮ ದೇಶಭಕ್ತಿ ಪ್ರಶ್ನಿಸುವವರ ವಿರುದ್ಧ ಕಿಡಿಕಾರಿದ್ದಾರೆ. ಜೀಯೋ ನ್ಯೂಸ್ ಚಾನೆಲ್ಗೆ ಸಂದರ್ಶನ ನೀಡಿದ ಅವರು ಐಪಿಎಲ್ ಚಾಂಪಿಯನ್ಸ್ ಕೆಕೆಆರ್ ಬೌಲಿಂಗ್ ಸಲಹೆಗಾರರಾಗಿರುವ ಮಾತ್ರಕ್ಕೆ ತಮ್ಮ ದೇಶಭಕ್ತಿ ಪ್ರಶ್ನಿಸುವವರ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಇಂತಹ ಅನಾಗರಿಕ ಕಾಮೆಂಟ್ಗಳಿಂದ ನನಗೆ ತೀವ್ರ ಕೋಪ ಬಂದಿದ್ದು, ಅವರು ನನ್ನ ಎದುರಿಗೆ ಬಂದರೆ ಸರಿಯಾಗಿ ಬುದ್ಧಿಕಲಿಸುತ್ತೇನೆ ಎಂದಿದ್ದಾರೆ. ಕೋಚಿಂಗ್ ಮತ್ತು ಟೆಲಿವಿಷನ್ನಲ್ಲಿ ಕೆಲಸ ಮಾಡುವುದು ನನ್ನ ಜೀವನೋಪಾಯವಾಗಿದ್ದು, ಈ ಹಂತದಲ್ಲಿ ಅದನ್ನು ಮಾಡದೇ ಹಣ್ಣು ಮಾರಾಟ ಮಾಡಿ ಜೀವಿಸಬೇಕೇ ಎಂದು ಪ್ರಶ್ನಿಸಿದ್ದಾರೆ.
ತಾವು ಪಿಸಿಬಿ ಕಚೇರಿಗಳ ಮುಂದೆ ನಿಂತು ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ಹಂತದಲ್ಲಿಲ್ಲ ಎಂದೂ ನುಡಿದರು. ತಾವು ಪಾಕಿಸ್ತಾನ ತಂಡಕ್ಕೆ ನೆರವಾಗಲು ಸದಾ ಆಸಕ್ತಿಹೊಂದಿದ್ದು, ಅವರಿಗೆ ಸುದೀರ್ಘಾವಧಿಯ ಸುಧಾರಣೆ ಯೋಜನೆ ನೀಡಲು ಇಚ್ಛಿಸಿದ್ದೇನೆ. ಆದರೆ ಅದನ್ನು ನನ್ನಿಂದ ಬಯಸದಿದ್ದಾಗ ನಾನು ಜೀವನೋಪಾಯಕ್ಕೆ ಬೇರೇನಾದರೂ ಮಾಡಬೇಕು ಎಂದು ನುಡಿದರು.