ವಿರಾಟ್ ಕೊಹ್ಲಿ ಹೇಳಿಕೆಗೆ ಬಿಸಿಸಿಐ, ಸುನಿಲ್ ಗವಾಸ್ಕರ್ ಗರಂ!

ಮಂಗಳವಾರ, 6 ಸೆಪ್ಟಂಬರ್ 2022 (09:50 IST)
ದುಬೈ: ತಾನು ಟೆಸ್ಟ್ ನಾಯಕತ್ವ ತ್ಯಜಿಸಿದಾಗ ಧೋನಿ ಮಾತ್ರ ನನಗೆ ಕರೆ ಮಾಡಿದ್ದರು. ಉಳಿದವರು ನನ್ನ ನಂಬರ್ ಇದ್ದರೂ ಕರೆ ಮಾಡಿರಲಿಲ್ಲ ಎಂದು ವಿರಾಟ್ ಕೊಹ್ಲಿ ನೀಡಿದ್ದ ಹೇಳಿಕೆ ಈಗ ಬಿಸಿಸಿಐ ಮತ್ತು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೆಂಗಣ್ಣಿಗೆ ಗುರಿಯಾಗಿದೆ.

ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಆಂಗ್ಲ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಕೊಹ್ಲಿ ನಾಯಕತ್ವ  ತ್ಯಜಿಸಿದಾಗ ಬಿಸಿಸಿಐನ ಬಹುತೇಕ ಅಧಿಕಾರಿಗಳು ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ನೀಡಿದ್ದರು. ಅವರ ಕಷ್ಟ ಕಾಲದಲ್ಲಿ ಬಿಸಿಸಿಐ ಸದಾ ಜೊತೆಗಿತ್ತು. ಹೀಗಾಗಿ ಅವರು ಇಂತಹ ಹೇಳಿಕೆ ಯಾಕೆ ನೀಡಿದರು ಎಂದು ಗೊತ್ತಾಗಲಿಲ್ಲ’ ಎಂದಿದ್ದಾರೆ.

ಇನ್ನು, ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಈ ಬಗ್ಗೆ ವ್ಯಂಗ್ಯ ಮಾಡಿದ್ದು, ‘ಅವರಿಗೆ ಯಾವ ಆಟಗಾರ ಸಂದೇಶ ಕಳುಹಿಸಲಿಲ್ಲ ಎಂದು ಹೇಳಲಿ. ಅವರನ್ನೇ ಹೋಗಿ ಸಹೋದರ, ನೀನು ಯಾಕೆ ಸಂದೇಶ ಕಳುಹಿಸಲಿಲ್ಲ ಎಂದು ಕೇಳಬಹುದು. ಅಷ್ಟಕ್ಕೂ ಅವರು ನಾಯಕತ್ವ ವಹಿಸಿಕೊಂಡಿದ್ದಲ್ಲ, ತ್ಯಜಿಸಿದ್ದರಷ್ಟೇ. ಹೀಗಾಗಿ ಅದಕ್ಕೆ ವಿಶ್ ಮಾಡಬೇಕಿತ್ತೇ? ಅದು ಮುಗಿದ ಅಧ‍್ಯಾಯಯವಾಗಿತ್ತು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ