ಶ್ರೀಲಂಕಾ ಕ್ರಿಕೆಟ್‌ನಲ್ಲಿ ಫಿಕ್ಸಿಂಗ್ ಹಗರಣದ ಆಮೂಲಾಗ್ರ ತನಿಖೆ: ರಾನಿಲ್ ವಿಕ್ರಮಸಿಂಘೆ

ಗುರುವಾರ, 21 ಜನವರಿ 2016 (15:38 IST)
ಶ್ರೀಲಂಕಾ ಕ್ರಿಕೆಟ್‌ನಲ್ಲಿ  ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ತನಿಖೆ ನಡೆಸುವ ಮೂಲಕ ಆಟಗಾರರಿಗೆ ಮತ್ತು ದೇಶಕ್ಕೆ ನ್ಯಾಯ ಒದಗಿಸಲಾಗುವುದು ಎಂದು ಶ್ರೀಲಂಕಾ ಪ್ರಧಾನಮಂತ್ರಿ ರಾನಿಲ್ ವಿಕ್ರಮಸಿಂಘೆ ಹೇಳಿದ್ದಾರೆ. 
 
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡುವುದಕ್ಕಾಗಿ ಆಟಗಾರರಿಗೆ ಲಂಚ ನೀಡಿದ ಆರೋಪವನ್ನು ಕುರಿತು ಶ್ರೀಲಂಕಾ ಪೊಲೀಸರು ನಾಯಕ ಎಂಜಲೋ ಮ್ಯಾಥೀವ್ಸ್ ಅವರನ್ನು ಮಂಗಳವಾರ ಪ್ರಶ್ನಿಸಿದರು.
 
ಗಾಲೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ  ಇಬ್ಬರು ಶ್ರೀಲಂಕಾ ಆಟಗಾರರಿಗೆ ವೆಸ್ಟ್ ಇಂಡೀಸ್ ವಿರುದ್ಧ ಕಳಪೆ ಪ್ರದರ್ಶನ ನೀಡಿ ಸೋಲುವುದಕ್ಕಾಗಿ  70,000 ಡಾಲರ್ ಆಫರ್ ಮಾಡಲಾಯಿತೆಂದೂ ಅದನ್ನು ಶ್ರೀಲಂಕಾ ಆಟಗಾರರು ತಿರಸ್ಕರಿಸಿದರು ಎಂದು ಮ್ಯಾಥೀವ್ಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಪಂದ್ಯದಲ್ಲಿ ಶ್ರೀಲಂಕಾ ಇನ್ನಿಂಗ್ಸ್ ಮತ್ತು 6 ರನ್‌ಗಳಿಂದ ಪ್ರವಾಸಿ ತಂಡವನ್ನು ಸೋಲಿಸಿತ್ತು ಮತ್ತು ರಂಗನಾಥ್ ಹೆರಾತ್ 10 ವಿಕೆಟ್ ಕಬಳಿಸಿದ್ದರು.
 
 ಸೋಮವಾರ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಲಂಚದ ಆರೋಪ ಕುರಿತು ತನಿಖೆಯಲ್ಲಿ  ಅದರ ವೇಗದ ಬೌಲಿಂಗ್ ಕೋಚ್ ಅನುಷಾ ಸಮರನಾಯಕೆಯನ್ನು 2 ತಿಂಗಳ ಅವಧಿಗೆ ಅಮಾನತುಗೊಳಿಸಿತು ಮತ್ತು ಅರೆಕಾಲಿಕ ನೆಟ್ ಬೌಲರ್ ಗಯಾನ್ ವಿಶ್ವಜಿತ್ ಅವರನ್ನು ವಜಾ ಮಾಡಿದೆ. ಏತನ್ಮಧ್ಯೆ, ಗಾಲೆ ಸ್ಟೇಡಿಯಂನ ಮಾಜಿ ಕ್ಯೂರೇಟರ್ ಜಯಾನಂದ ವರ್ನವೀರ ಅವರನ್ನು ಭ್ರಷ್ಟಾಚಾರ ನಿಗ್ರಹ ತನಿಖೆಯಲ್ಲಿ ಸಹಕರಿಸಲು ವಿಫಲರಾದ ಕಾರಣದ ಮೇಲೆ ಐಸಿಸಿ ಮೂರು ವರ್ಷಗಳ ಕಾಲ ನಿಷೇಧಿಸಿದೆ. 
 

ವೆಬ್ದುನಿಯಾವನ್ನು ಓದಿ