ಸಹನೆ ಕಳೆದುಕೊಂಡು ಪತ್ರಕರ್ತರಿಗೆ ಬಯ್ದ ವಿರಾಟ್ ಕೊಹ್ಲಿ

ಮಂಗಳವಾರ, 3 ಮಾರ್ಚ್ 2015 (18:52 IST)
ಟೀಂ ಇಂಡಿಯಾದ ಪ್ರಮುಖ ಆಟಗಾರ ಮತ್ತು ತಂಡದ ಉಪನಾಯಕ ವಿರಾಟ್ ಕೊಹ್ಲಿ ಮಂಗಳವಾರ ತರಬೇತಿ ಶಿಬಿರದ ಬಳಿಕ ದಿಢೀರನೇ ಸಹನೆ ಕಳೆದುಕೊಂಡು ಪತ್ರಕರ್ತರೊಬ್ಬರಿಗೆ ವಾಚಾಮಗೋಚರವಾಗಿ ಬಯ್ದ ಘಟನೆ ನಡೆದಿದೆ.
 
ಕೊಹ್ಲಿ ತಮ್ಮ ಡ್ರೆಸ್ಸಿಂಗ್ ರೂಂಗೆ ವಾಪಸಾಗುತ್ತಿದ್ದಾಗ ತಮ್ಮೆದರು ರಾಷ್ಟ್ರೀಯ ಪತ್ರಿಕೆಯ ಪತ್ರಕರ್ತರೊಬ್ಬರನ್ನು ನೋಡಿದರು.ದಿಢೀರನೇ ಅವರನ್ನು ಕೆಟ್ಟ ಪದಗಳಿಂದ ಕೊಹ್ಲಿ ಬಯ್ಯಲಾರಂಭಿಸಿದರು. ಸ್ವಲ್ಪ ಸಮಯ ಹಾಗೇ ಮುಂದುವರಿಯಿತು. ಕೆಲವು ತಂಡದ ಆಟಗಾರರು ಏನಾಯಿತೆಂದು ಅಚ್ಚರಿಯಿಂದ ನೋಡುತ್ತಿದ್ದರು.ಪತ್ರಕರ್ತನಿಗೆ ಕೂಡ ತನಗೆ ಕೊಹ್ಲಿ ದೂಷಿಸುತ್ತಿರುವುದು ಏಕೆಂದು ಅರ್ಥವಾಗಲಿಲ್ಲ.

ಕೊಹ್ಲಿ ಶಾಂತಚಿತ್ತನಾದ ಬಳಿಕ ತಮ್ಮ ಮತ್ತು ಗೆಳತಿ ಅನುಷ್ಕಾ ಶರ್ಮಾ ಬಗ್ಗೆ ಪತ್ರಿಕೆಯಲ್ಲಿ ಬರೆದಿದ್ದ ಲೇಖನವನ್ನು ಉಲ್ಲೇಖಿಸಿ ಅದೇ ಪತ್ರಕರ್ತ ಬರೆದಿರಬಹುದೆಂದು ಊಹಿಸಿದ್ದಾಗಿ ಯಾರ ಬಳಿಯೋ ಹೇಳಿದರು.ಆದರೆ ಕೊಹ್ಲಿ ಬಗ್ಗೆ ಬರೆದ ವರದಿಗಾರ ಅವರಲ್ಲ ಎಂದು ಹೇಳಿದ ಬಳಿಕ ಕೊಹ್ಲಿ ಬೇರೆ ಪತ್ರಕರ್ತರೊಬ್ಬರನ್ನು ಕರೆದು ಅವರ ಮೂಲಕ ಘಟನೆಗೆ ಕ್ಷಮೆಯಾಚಿಸಿದರು.
ವಿಶ್ವಸನೀಯ ಮೂಲಗಳ ಪ್ರಕಾರ ರವಿ ಶಾಸ್ತ್ರಿ ಖುದ್ದಾಗಿ ಕೊಹ್ಲಿಯ ಜೊತೆ ಮಾತನಾಡಿ ಸಹನೆ ಕಳೆದುಕೊಳ್ಳದಂತೆ ಸಲಹೆ ಮಾಡಿದರು. ಭವಿಷ್ಯದ ಟೀಂ ಇಂಡಿಯಾ ನಾಯಕ ಸಾರ್ವಜನಿಕವಾಗಿ ಹೀಗೆ ವರ್ತಿಸಬಾರದು ಎಂದು ಬುದ್ಧಿವಾದ ಹೇಳಿದರು. 

ವೆಬ್ದುನಿಯಾವನ್ನು ಓದಿ