ಕೊಹ್ಲಿಯನ್ನು ಎಲ್ಲಾ ಮೂರು ಸ್ವರೂಪದ ಆಟಗಳಿಗೆ ನಾಯಕರನ್ನಾಗಿಸಿ: ಪ್ರಸನ್ನ

ಶುಕ್ರವಾರ, 22 ಜನವರಿ 2016 (19:01 IST)
ಖ್ಯಾತ ಮಾಜಿ ಸ್ಪಿನ್ನರ್ ಎರಾಪಳ್ಳಿ ಪ್ರಸನ್ನ ಎಲ್ಲಾ ಮೂರು ಸ್ವರೂಪದ ಆಟಗಳಲ್ಲಿ ವಿರಾಟ್ ಕೊಹ್ಲಿ ಅವರನ್ನು ನಾಯಕರನ್ನಾಗಿ ಮಾಡುವ ಕಾಲ ಒದಗಿಬಂದಿದೆ ಎಂದು ತಿಳಿಸಿದ್ದಾರೆ. ಧೋನಿ ಅವರ ನಾಯಕತ್ವದ ಕೌಶಲ್ಯಗಳು ಕ್ಷೀಣಿಸಿದ್ದು, ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ ಮುಂದುವರಿಯಬಹುದು ಎಂದು ಪ್ರಸನ್ನ ಹೇಳಿದರು.
 
ಧೋನಿ ಮಾರ್ಚ್‌-ಏಪ್ರಿಲ್‌ನಲ್ಲಿ ನಡೆಯುವ ವಿಶ್ವ ಟಿ 20ಯಲ್ಲಿ ಭಾರತ ತಂಡದ ಮುನ್ನಡೆ ವಹಿಸುತ್ತಾರೆಂದು ಈಗಾಗಲೇ ಪ್ರಕಟವಾಗಿದ್ದರೂ, ಈ ನಿರ್ಧಾರವನ್ನು ಮರುಪರಿಶೀಲನೆ ನಡೆಸಬೇಕು ಎಂದು ಹೇಳಿದರು. 
 
ಧೋನಿ ಅವರಿಗೆ 33-34 ವರ್ಷ ವಯಸ್ಸಾಗಿದ್ದು, ನಾಯಕತ್ವದಲ್ಲಿ ಈಗ ಬದಲಾವಣೆ ಮಾಡದೇ ಇನ್ನು ಯಾವಾಗ ಮಾಡುವುದು ಎಂದು ಪ್ರಶ್ನಿಸಿದರು. ನೀವು ನನ್ನನ್ನು ಕೇಳುವುದಾದರೆ ಧೋನಿ ವಿಕೆಟ್ ಕೀಪಿಂಗ್ ಮಾಡಿ ಕೊಹ್ಲಿಗೆ ಕಾರ್ಯಭಾರವನ್ನು ಕೂಡಲೇ ವಹಿಸಿಕೊಡಲಿ, ಇದು ತಂಡದ ಹಿತಾಸಕ್ತಿಗೆ ಪೂರಕವಾಗಿದೆ ಎಂದು ಪ್ರಸನ್ನ ಹೇಳಿದರು. 
 ಕೆಲವು ಆಯ್ಕೆ ಕ್ರಮಗಳು ಅಚ್ಚರಿ ಮೂಡಿಸುತ್ತಿವೆ.

ನಂಬರ್ ಒನ್ ಬೌಲರ್‌ ಅಶ್ವಿನ್ ಅವರನ್ನು ಕಳೆದ ಎರಡು ಪಂದ್ಯಗಳಿಗೆ ಆಡಿಸದಿರುವುದು ತರ್ಕಕ್ಕೆ ಮೀರಿದೆ. ಅವರು ಮೆಲ್ಬರ್ನ್ ಪಂದ್ಯದಲ್ಲಿ ಆಡಿದ್ದರೆ ಜಡೇಜಾ ಜತೆಗೆ ದಾಳಿಯಲ್ಲಿ ಒತ್ತಡ ಹಾಕುತ್ತಿದ್ದರು. ಬದಲಿಗೆ ಧೋನಿ ಜಡೇಜಾ ಸ್ಟೀವ್ ಸ್ಮಿತ್ ವಿಕೆಟ್ ಕಬಳಿಸಿದ ಮೇಲೆ ದಾಳಿಯಿಂದ ಅವರನ್ನು ಹಿಂಪಡೆದು ಕೊನೆಯ ಓವರುಗಳಲ್ಲಿ ಮತ್ತೆ ಜಡೇಜಾರಿಗೆ ಬೌಲಿಂಗ್ ನೀಡಿದರು.  ಇದು ಖಂಡಿತವಾಗಿ ಪ್ರಶ್ನಾರ್ಹ ಎಂದು 49 ಟೆಸ್ಟ್‌ಪಂದ್ಯಗಳಲ್ಲಿ 189 ವಿಕೆಟ್ ಕಬಳಿಸಿರುವ ಪ್ರಸನ್ನ ಅಭಿಪ್ರಾಯಪಟ್ಟರು. 
 
ಮೊದಲ ಎರಡು ಏಕದಿನಗಳ ನಂತರ ಮನಿಷ್ ಪಾಂಡೆ ಅವರನ್ನು ಡ್ರಾಪ್ ಮಾಡಿ ಗುರುಕೀರತ್ ಸಿಂಗ್ ಮಾನ್ ಮತ್ತು ರಿಷಿ ಧಾವನ್ ಅವರನ್ನು ಆಯ್ಕೆ ಮಾಡಿದ ತರ್ಕ ತಮಗೆ ಅರ್ಥವಾಗಲಿಲ್ಲ ಎಂದೂ ಪ್ರಸನ್ನ ಹೇಳಿದರು. 
 

ವೆಬ್ದುನಿಯಾವನ್ನು ಓದಿ