ರವೀಂದ್ರ ಜಡೇಜಾ ಆಟದಲ್ಲಿ ಸುಧಾರಣೆ ತೋರಬೇಕಾಗಿದೆ:ಧೋನಿ

ಶನಿವಾರ, 7 ಮಾರ್ಚ್ 2015 (16:26 IST)
ಬೌಲರ್ ರವೀಂದ್ರ ಜಡೇಜಾ ಅವರ ಕಳಪೆ ಫಾರ್ಮ್‌ನಿಂದ ಅಸಮಾಧಾನಗೊಂಡಿರುವ ಟೀಂ ಇಂಡಿಯಾ ತಂಡದ ನಾಯಕ ಎಂ.ಎಸ್.ಧೋನಿ, ಜಡೇಜಾ ಸುಧಾರಣೆ ಕಾಣುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಜಡೇಜಾ ಅತಿ ಕಳಪೆ ಪ್ರದರ್ಶನ ನೀಡಿದ್ದರು. ಇದರಿಂದ, ನಿರಾಸೆಗೊಂಡ ಧೋನಿ ಜಡೇಜಾಗೆ ಉತ್ತಮ ಪ್ರದರ್ಶನ ನೀಡುವಂತೆ ಸಲಹೆ ನೀಡಿದ್ದಾರೆ.

ಜಡೇಜಾ ತಮ್ಮ ಆಟದಲ್ಲಿ ಸುಧಾರಣೆ ಕಾಣುವುದು ಅನಿವಾರ್ಯವಾಗಿದೆ. ತಂಡ ಸಂಪೂರ್ಣವಾಗಿ ಜಡೇಜಾ ಮೇಲೆ ವಿಶ್ವಾಸವಿಟ್ಟಿದೆ. ಆದರೆ, ಪಂದ್ಯದಲ್ಲಿ ಕೊನೆಗೆ ವಿಶ್ವಾಸ ಕೆಲಸಕ್ಕೆ ಬರುವುದಿಲ್ಲ. ಅತ್ಯುತ್ತಮ ಪ್ರದರ್ಶನ ಮಾತ್ರ ಆಟಗಾರನಿಗೆ ಬೆಂಬಲವಾಗಿ ನಿಲ್ಲುತ್ತದೆ ಎಂದಿದ್ದಾರೆ.

ರವೀಂದ್ರ ಜಡೇಜಾ ತುಂಬಾ ಪ್ರತಿಭಾವಂತ ಕ್ರಿಕೆಟಿಗ. ಆದರೆ, ಅವರು ಆಟದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ. ಶಾರ್ಟ್‌ಪಿಚ್ ಡೆಲೆವರಿಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕಾಗಿದೆ ಎಂದು ಹೇಳಿದ್ದಾರೆ.

ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಡೇಜಾ, ಪಾಕಿಸ್ತಾನದ ವಿರುದ್ಧ ಮೂರು ರನ್, ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಮತ್ತು ವೆಸ್ಟ್ ಇಂಡೀಸ್ ವಿರುದ್ಧ 13 ರನ್‌ಗಳನ್ನು ಮಾತ್ರ ಕಲೆಹಾಕಿ ವಿಫಲ ಆಟಗಾರ ಎನ್ನುವ ಖ್ಯಾತಿಗೊಳಗಾಗಿದ್ದಾರೆ.

ವೆಬ್ದುನಿಯಾವನ್ನು ಓದಿ